
ಗುಳೇದಗುಡ್ಡ: ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದವರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಆರ್ಥಿಕ ಅಭಿವೃದ್ಧಿ, ಹಣಕಾಸಿಗೆ ಸಂಬಂಧಿಸಿದ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹೇಳಿದರು.
ತಾಲ್ಲೂಕಿನ ಹಂಸನೂರ ಗ್ರಾಮದಲ್ಲಿ ಶುಕ್ರವಾರ ವಾಸಿಸುತ್ತಿರುವ ಚೆನ್ನದಾಸರ ಸಮುದಾಯದವರು ವಾಸಿಸುವ ಕುಟುಂಬಗಳ ಸ್ಥಳ ಪರಿಶೀಲನೆ ಮತ್ತು ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮುದಾಯದ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹಾಗೂ ವ್ಯಾಪಾರ ಉದ್ದಿಮೆ ಸ್ಥಾಪಿಸಬೇಕು, ಗುಡಿ ಕೈಗಾರಿಕೆ ಸ್ಥಾಪಿಸಿಕೊಳ್ಳುವ ಮೂಲಕ ಆರ್ಥಿಕ ಸಬಲತೆ ಸಾಧಿಸಬೇಕು. ಸರ್ಕಾರ ಅಲೆಮಾರಿಗಳ ಜೊತೆ ಇದೆ ಎಂದು ಹೇಳಿದರು.
ಹಂಸನೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನದಾಸರ ಸಮುದಾಯದ ಆಶಾ ಚಿಂತಾಕಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯದ ಸ್ಥಿತಿಗತಿಯನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರಿಗೆ ಸವಿಸ್ತಾರವಾಗಿ ತಿಳಿಸಿದರು. ಅಧ್ಯಕ್ಷರು ಸಮುದಾಯದವರ ಜೊತೆಗೆ ಸಂವಾದ ನಡೆಸಿದರು.
ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ರಾಮಚಂದ್ರ ಮೈತ್ರಿ, ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ, ಗ್ರಾಮಾಡಳಿತ ಅಧಿಕಾರಿ ಮಾಗುಂಡಪ್ಪ ಗುಡಿಸಾಗರ ಪಿಡಿಒ ಮಂಜುನಾಥ ಅರಳಿಕಟ್ಟಿ, ನಾಗರತ್ನಾ ಜಮಖಂಡಿ, ಸುರೇಶ ಚಿಮ್ಮಲ,ಬಸವರಾಜ ಕುಂಬಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.