
ಇಳಕಲ್: 'ದ್ವೇಷ ಭಾಷಣ ತಡೆ ಕಾಯ್ದೆಯು ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ ಹಾಗೂ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ. ಹಾಗಾಗಿ ರಾಜ್ಯಪಾಲರು ಈ ಮಸೂದೆಯನ್ನು ತಿರಸ್ಕರಿಸಬೇಕು' ಎಂದು ಬಿಜೆಪಿ ಮುಖಂಡ ರಾಜುಗೌಡ ಡಿ ಒತ್ತಾಯಿಸಿದರು.
ನಗರದ ಕಂಠಿ ವೃತ್ತದಲ್ಲಿ ದ್ವೇಷ ಭಾಷಣ ತಡೆ ಮಸೂದೆಯನ್ನು ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
' ರಾಜ್ಯ ಸರ್ಕಾರದ ವೈಫಲ್ಯ ಗಳನ್ನು ಎತ್ತಿ ತೋರಿಸುವವರನ್ನು ಹಣಿಯಲು ಈ ಕಾಯ್ದೆ ತರಲಾಗಿದೆ. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದಲೂ ಈ ಕಾಯ್ದೆ ತಂದಿದ್ದಾರೆ. ಸಂವಿಧಾನವನ್ನು ಗಾಳಿಗೆ ತೂರಿರುವ ಈ ಕಾಯ್ದೆಗೆ ರಾಜ್ಯಪಾಲರು ಒಪ್ಪಗೆ ನೀಡಬಾರದು' ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಹಾಂತಗೌಡ ಪಾಟೀಲ್ ಮಾತನಾಡಿ ಸರ್ಕಾರ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ, ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತಿದೆ ಎಂದರು.
ಕಾಯ್ದೆಗೆ ಅಂಗೀಕಾರ ನೀಡದಂತೆ ರಾಜ್ಯಪಾಲರನ್ನು ಆಗ್ರಹಿಸಿ, ತಹಶೀಲ್ದಾರ್ ಅಮರೇಶ ಪಮ್ಮಾರ ಮೂಲಕ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಲಕ್ಷ್ಮಣ ಗುರಂ, ಮಲ್ಲಯ್ಯ ಮೂಗನೂರಮಠ, ಮಹಾಂತಪ್ಪ ಚೆನ್ನಿ, ಸುಗೂರೇಶ ನಾಗಲೋಟಿ, ಬಸು ಭಜಂತ್ರಿ, ವಿಜಯ ಜಾಲಗಾರ, ಕಪಿಲ್ ಪವಾರ, ತೃಪ್ತಿ ಸಾಲಿಮಠ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.