ADVERTISEMENT

ಬಾದಾಮಿ: ಧಾರಾಕಾರ ಮಳೆ ತುಂಬಿ ಹರಿದ ಹಳ್ಳಗಳು

ಹೆಸರು ಬೆಳೆ, ಹತ್ತಿ ಜಲಾವೃತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:28 IST
Last Updated 8 ಆಗಸ್ಟ್ 2025, 4:28 IST
ಬಾದಾಮಿ-ಬಾಗಲಕೋಟೆ ರಸ್ತೆಯ ಕೊಂಕಣಕೊಪ್ಪ ಗ್ರಾಮದ ಬಳಿ ತುಂಬಿ ಹರಿದ ಹಳ್ಳ
ಬಾದಾಮಿ-ಬಾಗಲಕೋಟೆ ರಸ್ತೆಯ ಕೊಂಕಣಕೊಪ್ಪ ಗ್ರಾಮದ ಬಳಿ ತುಂಬಿ ಹರಿದ ಹಳ್ಳ   

ಬಾದಾಮಿ: ಗುಡುಗು ಸಿಡಿಲಿನ ಆರ್ಭಟದಿಂದ ಬುಧವಾರ ರಾತ್ರಿ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಸುರಿದ ಧಾರಾಕಾರ ಮಳೆಯಿಂದ ಹಳ್ಳಕೊಳ್ಳಗಳು ಭರ್ತಿಯಾಗಿ ತುಂಬಿ ಹರಿದವು. 

ಬಾದಾಮಿ-ಬಾಗಲಕೋಟೆ ರಸ್ತೆಯಲ್ಲಿದ್ದ ಕೊಂಕಣಕೊಪ್ಪ ಗ್ರಾಮದ ಸಮೀಪದ ಹಳ್ಳವು ತುಂಬಿ ಹರಿಯಿತು.

ಬಾದಾಮಿ ಸುತ್ತಲಿನ ಬೆಟ್ಟಗಳ ಪರಿಸರದಿಂದ ಬರುವ ಸಿದ್ದನಗವಿ ಹಳ್ಳ, ಕೋಣಮ್ಮ ದೇವಾಲಯದ ಹಳ್ಳ, ಸಾಬರಪಡಿ ಹಳ್ಳ, ಪಾರಾದ ಬಾವಿ ಹಳ್ಳ ಮತ್ತು ಅಡ್ಡ ಹಳ್ಳಗಳು ಭರ್ತಿಯಾಗಿ ಹರಿದವು. ಹಳ್ಳಗಳು ತುಂಬಿ ಹರಿದಿದ್ದರಿಂದ ಕೊಳವೆ ಬಾವಿಗಳ ಅಂತರ್ಜಲಮಟ್ಟ ಅಧಿಕವಾಗಿವೆ ಎಂದು ರೈತರು ಹೇಳಿದರು.

ADVERTISEMENT

‘ಮಳೆಯಿಂದ ಹೆಸರು ಬೆಳೆಗಳು ಜಲಾವೃತವಾಗಿವೆ. ಬೇಲೂರ, ಹೆಬ್ಬಳ್ಳಿ ಮತ್ತು ಹಲಕುರ್ಕಿ ಭಾಗದ ಪ್ರದೇಶದಲ್ಲಿ ಮೊದಲು ಬಿತ್ತನೆ ಮಾಡಿದ ಹೆಸರು ಬೆಳೆ ಜಲಾವೃತವಾಗಿವೆ. ಕೊಯ್ಲಿಗೆ ಬಂದ ಹೆಸರು ಕೈಗೆ ಬಾರದಂತಾಗಿದೆ’ ಎಂದು ರೈತ ಭೀಮಪ್ಪ ಹೊಸಮನಿ ಹೇಳಿದರು.

‘ಅಧಿಕ ಮಳೆಯಿಂದ ಹೆಸರು, ತೊಗರಿ ಮತ್ತು ಮೆಕ್ಕೆಜೋಳ ಬೆಳೆಯಲ್ಲಿ ನೀರು ನಿಂತಿದೆ. ತೊಗರಿ, ಮೆಕ್ಕೆಜೋಳಕ್ಕೆ ಏನೂ ತೊಂದರೆ ಇಲ್ಲ. ಮೊದಲು ಬಿತ್ತನೆಯಾದ ಹೆಸರು ಕೊಯ್ಲಿಗೆ ಬಂದಿದೆ. ಹಾನಿಯಾದ ಬೆಳೆಯ ಬಗ್ಗೆ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳಿಗೆ ಸರ್ವೆ ಮಾಡಲು ತಿಳಿಸಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರಕಣ್ಣವರ ಹೇಳಿದರು.

ಕುಳಗೇರಿ ಹೋಬಳಿಯಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ ತಳಕವಾಡ ಗ್ರಾಮದ ವೀರಯ್ಯ ಮೂಗುನೂರಮಠ ಅವರ ಹತ್ತಿ ಬೆಳೆಯಲ್ಲಿ ಮಳೆ ನೀರು ನಿಂತಿರುವುದು

ಕುಳಗೇರಿ ಸುತ್ತಮುತ್ತ ಧಾರಾಕಾರ ಮಳೆ

ಕುಳಗೇರಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸುಮಾರು 4 ಗಂಟೆ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ಹೋಬಳಿಯಲ್ಲಿ 6.5 ಸೆಂ.ಮೀ ಮಳೆ ದಾಖಲಾಗಿದೆ. ಬಹುತೇಕ ರೈತರಿಗೆ ಮಳೆ ವರದಾನವಾಗಿದೆ. ಕೆಲವೆಡೆ ಬೆಳೆಗಳಿಗೆ ಮಳೆ ಅವಶ್ಯವಾಗಿದ್ದು ಮತ್ತೆ ಕೆಲವೆಡೆ ಮಳೆಯಿಂದ ಬೆಳೆಗಳಲ್ಲಿ ನೀರು ನಿಂತಿದೆ.  ಹೋಬಳಿಯ ತಳಕವಾಡ ಗ್ರಾಮದ ವೀರಯ್ಯ ಮೂಗು ನೂರಮಠ ಅವರಿಗೆ ಸೇರಿದ ಹತ್ತಿ ಬೆಳೆಯಲ್ಲಿ ಮಳೆಯ ನೀರು ನಿಂತಿದೆ. ‘ಮೆಕ್ಕಜೋಳ 9500 ಹೆಕ್ಟೇರ್‌ ಕಬ್ಬು 8000 ಹತ್ತಿ 600 ಸೂರ್ಯಕಾಂತಿ 400 ಈರುಳ್ಳಿ 3000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಪರಶುರಾಮ ಗಣಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೋಬಳಿಯ ರೈತರು ಈ ಸಲ ಮೆಕ್ಕಜೋಳ ಈರುಳ್ಳಿ ಸೇರಿ ಹಲವು ಬೆಳೆಗಳನ್ನು ಬೆಳೆಯಲು ದುಬಾರಿ ಬೀಜಗಳನ್ನು ಖರೀದಿ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೆ ಸಾಲದ ಸುಳಿಗೆ ಸಿಲುಕಿಕೊಳ್ಳುತ್ತಾನೆ’ ಎಂದು ತಳಕವಾಡ ಗ್ರಾಮದ ಶೇಖಪ್ಪ ಬಡಿಗೇರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.