ಬೀಳಗಿ ತಾಲ್ಲೂಕಿನ ಸುನಗ ಗ್ರಾಮದಲ್ಲಿ ಬುಧವಾರ ಜೋರಾಗಿ ಸುರಿದ ಮಳೆಯಿಂದಾಗಿ ರೈತ ತಿಮ್ಮಣ್ಣ ಪೆದ್ದರ ಜಮೀನಿನ ನೀರಿನಲ್ಲಿ ತೆಲುತ್ತಿರುವ ಈರುಳ್ಳಿ
ಬೀಳಗಿ: ಈರುಳ್ಳಿ ರಾಶಿಯಲ್ಲಿ ಮಳೆಯ ನೀರು ಹರಿದ ಪರಿಣಾಮ ಈರುಳ್ಳಿ ರಕ್ಷಣೆಗೆ ಸುನಗ ಗ್ರಾಮದ ರೈತರು ಬುಧವಾರ ಪರದಾಡಿದರು.
ಈರುಳ್ಳಿ ಬೆಲೆ ಇಳಿಕೆಯ ಆತಂಕ, ಬೀಜ ಗೊಬ್ಬರ, ಕಳೆ ತಗೆಯುವುದು ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದು ಕಟಾವು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳುಹಿಸಿ ಉತ್ತಮ ಆದಾಯದ ನಿರೀಕ್ಷೆಯಲ್ಲಿ ರೈತರಿದ್ದರು.
ಆದರೆ ಅನಿರೀಕ್ಷಿತವಾಗಿ ಬುಧವಾರ ಸುರಿದ ಮಳೆಯಿಂದಾಗಿ ಈರುಳ್ಳಿ ರಾಶಿ ಮಳೆಯ ನೀರಿನಲ್ಲಿ ತೆಲಾಡುವಂತಾಗಿದೆ. ರಸ್ತೆಯ ಬಯಲು ಜಾಗದಲ್ಲಿ ಹಲವು ರೈತರು ಈರುಳ್ಳಿ ಕೊಯ್ಲು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಸಾಲ ಮಾಡಿ ದುಬಾರಿ ಗೊಬ್ಬರ, ಕೂಲಿ ಸೇರಿ ಈರುಳ್ಳಿಗೆ ಕನಿಷ್ಟ ಪ್ರತಿ ಎಕರೆಗೆ ₹ 60 ರಿಂದ ₹70 ಸಾವಿರ ಖರ್ಚು ಬರುತ್ತದೆ.
ಕಟಾವು ಮಾಡಿ ಸ್ವಚ್ಛಗೊಳಿಸಿ ಸ್ವಲ್ಪ ಒಣಹಾಕಿ ಚೀಲಕ್ಕೆ ತುಂಬಿ ಮಾರುಕಟ್ಟೆಗೆ ಕಳಿಸುವ ಸಿದ್ದತೆ ಮಾಡಿಕೊಂಡಿದ್ದೆವು. ಆದರೆ ಈರುಳ್ಳಿ ರಾಶಿಯು ಮಳೆಯ ನೀರಿನಿಂದಾಗಿ ತೊಯ್ದು ಹೋಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ಎಂದು ರೈತ ತಿಮ್ಮಣ್ಣ ಪೆದ್ದರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.