
ಹುನಗುಂದ: ಸಮೀಪದ ನಾಗೂರ ಕ್ರಾಸ್ ಹತ್ತಿರದ ಬೆಳಗಾವಿ– ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಕಬ್ಬು ತುಂಬಿದ ಟ್ರ್ಯಾಕ್ಟರ್ನ ಟೇಲರ್ ಆಯತಪ್ಪಿ ಪಲ್ಟಿಯಾದ ಪರಿಣಾಮ ಹೆದ್ದಾರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಗ್ರಾಮದಿಂದ ರಾಜ್ಯ ಹೆದ್ದಾರಿ ಮೂಲಕ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ ಹತ್ತಿರವಿರುವ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಪಲ್ಟಿ ಆಗಿದ್ದು, ಸುಮಾರು ಎರಡು ಗಂಟೆಗಳ ಕಾಲ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ಸ್ಥಗಿತಗೊಂಡಿತು. ಪರ್ಯಾಯವಾಗಿ ನಾಗೂರ ಕ್ರಾಸ್ ಹತ್ತಿರ ಹಿರೇಬಾದವಾಡಗಿ ಕ್ರಾಸ್, ಬನ್ನಿಹಟ್ಟಿ, ಬೇವಿನಮಟ್ಟಿ ಕ್ರಾಸ್ವರಗೆ ಸುತ್ತಿ ಬಳಸಿ ರಾಜ್ಯ ಹೆದ್ದಾರಿ ಮೂಲಕ ವಾಹನಗಳು ಸಂಚರಿಸಿದವು.
ದೊಡ್ಡದೊಡ್ಡ ವಾಹನಗಳು ವಿಧಿಯಿಲ್ಲದೆ ರಸ್ತೆಯಲ್ಲಿದ್ದ ಕಬ್ಬು ತೆರವುಗೊಳ್ಳುವವರೆಗೆ ಹೆದ್ದಾರಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಬಂದೊದಗಿತ್ತು. ಎರಡೂ ಮಾರ್ಗಗಳೂ ಬಂದ್ ಆದ ಕಾರಣ ಸಾರಿಗೆ ಬಸ್ ಬಾರದೆ ಪ್ರಯಾಣಿಕರು ಪರದಾಡುವಂತಾಯಿತು.
‘ಹೆಚ್ಚಿನ ಪ್ರಮಾಣದ ಕಬ್ಬಿನ ಲೋಡ್ನೊಂದಿಗೆ ತೆರಳುತ್ತಿರುವ ಟ್ರ್ಯಾಕ್ಟರ್ಗಳಿಂದ ಈ ಪರಿಸ್ಥಿತಿ ಉಂಟಾಗುತ್ತಿದೆ. ಜತೆಗೆ ಟ್ರ್ಯಾಕ್ಟರ್ಗಳಲ್ಲಿ ಬಳಸುವ ಧ್ವನಿವರ್ಧಕಗಳೂ ಇದಕ್ಕೆ ಕಾರಣ. ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪ್ರಯಾಣಿಕರು ತಿಳಿಸಿದರು.
ನಂತರ ಎರಡು ಗಂಟೆ ಬಳಿಕ ಜೆಸಿಬಿ ಮೂಲಕ ರಸ್ತೆಯಲ್ಲಿ ಹರಡಿದ್ದ ಕಬ್ಬನ್ನು ರಸ್ತೆ ಪಕ್ಕ ತೆರವುಗೊಳಿಸಿದ ನಂತರ ವಾಹನ ಸಂಚಾರ ಸುಗಮವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.