ಹುನಗುಂದ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ 2024– 25ನೇ ಸಾಲಿನ 64ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಆಡಳಿತ ಮಂಡಳಿಗೆ ನಡೆದ ಚುನಾವಣೆಯ ತಯಾರಿಯಲ್ಲಿನ ಲೋಪದೋಷಗಳು ಕುರಿತು ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ಬ್ಯಾಂಕಿನ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಕಾರ್ಯಾಲಯದಲ್ಲಿ ನಡೆದ 64ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಅಧ್ಯಕ್ಷ ಶಿವನಗೌಡ ಜಡಿಯಪ್ಪಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ಯಾಂಕಿನ ವ್ಯವಸ್ಥಾಪಕ ಆನಂದಗೌಡ ಎಂ.ವಿ, 2024–25ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು.
ವರದಿ ವಾಚನ ಮುಗಿಯುತ್ತಿದ್ದಂತೆ ಕೆಲವು ಸದಸ್ಯರು, ‘ನಾವು ಪ್ರತಿ ಸಭೆಗೂ ಹಾಜರಿದ್ದು ಸಹಿ ಮಾಡಿ ಬ್ಯಾಂಕಿನಲ್ಲಿ ವ್ಯವಹಾರ ಮಾಡಿದರೂ ಸಹ ಚುನಾವಣಾ ಸಂದರ್ಭದ ಮತದಾರ ಯಾದಿಯಲ್ಲಿ ನಮ್ಮ ಹೆಸರು ತೆಗೆದು ಹಾಕಿರುವುದು ಏಕೆ?’ ಎಂದು ವ್ಯವಸ್ಥಾಪಕರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ಆನಂದಗೌಡ ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ರೀತಿಯಾಗಿದೆ ಎಂದರು.
ಅಧ್ಯಕ್ಷ ಶಿವನಗೌಡ ಜಡಿಯಪ್ಪಗೌಡರ ಮಾತನಾಡಿ, ‘ರೈತರೇ ಬ್ಯಾಂಕಿನ ಮುಖ್ಯ ಗ್ರಾಹಕರು. ಚುನಾವಣೆ ಸಂದರ್ಭದಲ್ಲಿನ ಲೋಪದೋಷಗಳು ಹಾಗೂ ಸಾಲ ವಿತರಣೆಯಲ್ಲಿನ ಅಡತಡೆಗಳನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಬ್ಯಾಂಕಿನ ಸದಸ್ಯರ ಹಿತ ಕಾಪಾಡಲಾಗುವುದು’ ಎಂದರು.
ಉಪಾಧ್ಯಕ್ಷರಾದ ಪ್ರಭಾಕರ ನಾಗರಾಳ, ಎಂ.ಆರ್.ಕಾಶಪ್ಪನವರ, ಎಸ್.ಪಿ. ಬಿನ್ನದ, ಆರ್.ವಿ.ಶೀಲವಂತ, ಶೇಖರಪ್ಪ ಬಾದವಾಡಗಿ, ಸುವರ್ಣ ಇಲಕಲ್ಲ, ಎನ್.ಎಂ.ಲಮಾಣಿ, ಕೆ.ಎಂ.ಮುದಗಲ್ಲ, ಸೋಮಶೇಖರ ಬಲಕುಂದಿ, ಚಂದ್ರಶೇಖರ ಸನ್ನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.