ತೇರದಾಳ: ಕ್ರೀಡೆಗಳಿಂದ ಕೇವಲ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಮಾತ್ರವಲ್ಲ, ಜ್ಞಾನ ಹೆಚ್ಚಳ ಹಾಗೂ ಸಾಮರಸ್ಯವನ್ನು ಕಲಿಸಲು ನಾಂದಿಯಾಗಲಿದೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು.
ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ಬುಧವಾರ ಜರುಗಿದ 14 ವರ್ಷ ವಯೋಮಾನದೊಳಗಿನ ಮಕ್ಕಳ ತೇರದಾಳ ಪಶ್ಚಿಮ ವಲಯದ ಕ್ರೀಡಾಕೂಟಕ್ಕೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಬಹಳಷ್ಟು ಅಂಕ ಗಳಿಸಿ, ದೈಹಿಕವಾಗಿ ಸದೃಢವಾಗಿರದಿದ್ದರೆ ಪ್ರಯೋಜನವಿಲ್ಲ. ಕ್ರೀಡೆ ಹಾಗೂ ಓದು ಎರಡು ಮುಖ್ಯವಾಗಿದ್ದು ವಿದ್ಯಾರ್ಥಿ ದೆಸೆಯಲ್ಲಿಯೇ ಎರಡನ್ನೂ ರೂಢಿಸಿಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದ ಸಿಬಿಎಸ್ಇ ಶಾಲೆ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿ, ಪಾಲಕರು ತಮ್ಮ ಮಕ್ಕಳು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಕ್ರೀಡೆಗಳಲ್ಲಿ ನಮ್ಮ ಭಾಗದ ಮಕ್ಕಳು ಸಾಕಷ್ಟು ಸಾಧಕರಾಗಬೇಕಾಗಿದೆ. ಉತ್ತಮ ಕ್ರೀಡಾಪಟುಗಳಿಗೆ ಸರ್ಕಾರಗಳು ಉತ್ತಮ ಪ್ರೋತ್ಸಾಹ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿವೆ. ಅವುಗಳ ಸದುಪಯೋಗ ಮಾಡಿಕೊಂಡು ನಾಡಿನ ಕೀರ್ತಿ ಹೆಚ್ಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಕ್ರೀಡಾಜ್ಯೋತಿ ಹಾಗೂ ಕ್ರೀಡಾ ಧ್ವಜದಡಿ ವಿ.ಎಸ್. ಉಪ್ಪಿನ ಪ್ರತಿಜ್ಞಾವಿಧಿ ಬೋಧಿಸಿದರು. ಸಿದ್ದೇಶ್ವರ ಶಾಲೆಯ ಮುಖ್ಯಶಿಕ್ಷಕ ಬಿ.ಟಿ. ಪತ್ತಾರ, ಚೇರಮನ್ ಮಹೇಶ ಹಂಜಿ, ಸಿಆರ್ಪಿಗಳಾದ ಅನಂತರಾಜು ಮುಧೋಳ, ಮಹೇಶ ಸೋರಗಾಂವಿ, ಎಎಸ್ಐ ಲಕ್ಷ್ಮಣ ಇಮ್ಮಡಿ, ಸರ್ಕಾರಿ ಬಾಲಕಿಯರ ಶಾಲೆಯ ಮುಖ್ಯಶಿಕ್ಷಕ ಕೆ.ಡಿ. ಮಾಲಗಾಂವಿ, ಬಿಆರ್ಪಿ ಶಿವಾನಂದ ಯಾದವಾಡ, ಡಿ.ಬಿ. ಪಾಟೀಲ, ಆರ್.ಆರ್. ಕುಲಕರ್ಣಿ, ಡಿ.ಎ. ಉಗಾರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಐ.ಬಿ. ಬಾಗಲಕೋಟ ಸೇರಿದಂತೆ ನಗರ ಮಟ್ಟದ ಪ್ರೌಢ-ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಕರು, ನಿರ್ಣಾಯಕರು, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.