
ಜಮಖಂಡಿ: ‘ಗಿಡ-ಮರಗಳಂತೆ ಮನುಷ್ಯರಿಗೆ ನೆರಳು ನೀಡಲು ಆಗುವುದಿಲ್ಲ. ಆದರೆ, ನೆರವು ನೀಡಬಹುದು. ಪರಹಿತ ಬಯಸುವುದು ಮತ್ತು ಪರೋಪಕಾರ ಮಾಡುವುದು ಸಾರ್ಥಕ ಬದುಕಿನ ಉಪಾಯವಾಗಿದೆ’ ಎಂದು ಅಮಲಝರಿ– ಮೆಳ್ಳಿಗೇರಿಯ ಶ್ರದ್ಧಾನಂದ ಮಠದ ಜ್ಞಾನಮಯಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ‘ಶ್ರೀಗುರುದೇವ ಸತ್ಸಂಗ’ದ ಸಾನ್ನಿಧ್ಯ ವಹಿಸಿ ‘ಸಾರ್ಥಕ ಬದುಕಿಗೆ ಸರಳ ಸೂತ್ರಗಳು’ ಕುರಿತು ಅವರು ಆಶೀರ್ವಚನ ನೀಡಿದರು.
ಶ್ರೀಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ‘ದೇಹ, ಇಂದ್ರಿಯ, ಮನಸ್ಸು, ಚಿತ್ತ, ಬುದ್ಧಿಯನ್ನು ಬಳಸಿಕೊಂಡು ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ಆತ್ಮಜ್ಞಾನಿ, ಅನುಭಾವಿ ಆಗಬೇಕು. ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ’ ಎಂದು ಆಶೀರ್ವಚನ ನೀಡಿದರು.
ಸಿದ್ದಾಪುರದ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಮಹಾದೇವಿ ಅಕ್ಕನವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯಲ್ಲಪ್ಪ ಶಿವಾಪುರ ಮಾತನಾಡಿದರು. ನರೇಂದ್ರ ಬಾವಿಕಟ್ಟಿ, ವೇದಾ ಬಾವಿಕಟ್ಟಿ, ಚಿತ್ರಕಲೆ ಶಿಕ್ಷಕ ಸುರೇಶ ಜನವಾಡ, ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ಶಿವಾಜಿ ಜಾಧವ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಸಂಗಮೇಶ ತೆಲಸಂಗ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.