ಬಾದಾಮಿ: ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕನ್ನಡ ಮಾಧ್ಯದಲ್ಲಿಯೇ ಶಿಕ್ಷಣ ಕೊಡಿಸಿ. ಮಾತೃ ಭಾಷೆಯ ಮೂಲಕ ಬೇರೆ ಭಾಷೆಯನ್ನು ಮಕ್ಕಳು ಚೆನ್ನಾಗಿ ಕಲಿಯುವರು. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಕನ್ನಡ ಭಾಷೆಯ ಸಂಸ್ಕಾರ ಕೊಡಿ ಎಂದು ವೀರಪುಲಿಕೇಶಿ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ.ಪಟ್ಟಣದ ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಭಟ್ಟಾರಿಕಾ ಸಭಾ ಭವನದ ಡಾ.ಬಿ.ಎಸ್. ಗದ್ದಗಿಮಠ ವೇದಿಕೆಯಲ್ಲಿ ಭಾನುವಾರ ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜರುಗಿದ 2022-26ರ ಅವಧಿಯ ಕಾರ್ಯಚಟುವಟಿಕೆ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭಕ್ಕೆ ಅವರು ಚಾಲನೆ ನೀಡಿದರು.
ಕನ್ನಡ ಭಾಷೆಯು ವ್ಯವಹಾರಿಕವಾಗಿ ಮತ್ತು ಗ್ರಾಂಥಿಕವಾಗಿ ನಿತ್ಯ ಸತ್ಯವಾಗಬೇಕು. ಚಾಲುಕ್ಯರ ನಾಡಿನ ಶಿಲ್ಪಕಲೆ ಮತ್ತು ಕನ್ನಡ ಶಾಸನಗಳ ಅಧ್ಯಯನ ಮತ್ತು ಸಂಶೋಧನೆಯಾಗಬೇಕು. ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಕಾರ್ಯಕ್ರಮಗಳು ನಿರಂತವಾಗಿ ನಡೆಯಲಿ ಎಂದು ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರವಿ ಕಂಗಳ, ಹಾಲಿ ಅಧ್ಯಕ್ಷ ಬಿ.ಎಫ್. ಹೊರಕೇರಿ ಅವರಿಗೆ ಕಸಾಪ ಕನ್ನಡ ಧ್ವಜವನ್ನು ಹಸ್ತಾಂತರ ಮಾಡಿದರು.
ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆಯಲ್ಲಿ ಪಂಚ ಯೋಜನೆಗಳು ಮತ್ತು ತಾಲ್ಲೂಕಿನಲ್ಲಿ ಸಪ್ತ ಯೋಜನೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಅವರು ಅನಸೂಯಾ ಯಲಿಗಾರ ಬರೆದ ‘ನನ್ನೊಳಗಿನೊಳಗಿನ’ ಕವನ ಸಂಕಲನ ಕೃತಿ ಬಿಡುಗಡೆ ಮಾಡಿದರು. ಜಯಶ್ರೀ ಭಂಡಾರಿ ಕೃತಿ ಅವಲೋಕನ ಮಾಡಿದರು.
ಡಾ.ಕರವೀರಪ್ರಭು ಕ್ಯಾಲಕೊಂಡ, ನಿವೃತ್ತ ಪ್ರಾಚಾರ್ಯರಾದ ಜಿ.ಬಿ. ಶೀಲವಂತರ, ಆರ್.ಬಿ. ಸಂಕದಾಳ, ಸಾಹಿತಿ ದಾಜೀಬಾ ಜಗದಾಳೆ, ವೆಂಕಟೇಶ ಇನಾಂದಾರ, ಪಾರ್ವತಿ ಲೆಂಕೆನ್ನವರ, ಶಾರದಾ ಮೇಟಿ ಶಾಂತವೀರಯ್ಯ ಹಲಗಲಿಮಠ, ಲೋಕಣ್ಣ ಭಜಂತ್ರಿ, ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಮತ್ತು ಸಾಹಿತ್ಯಾಸಕ್ತರು ಇದ್ದರು.
ಶಂಕರ ಹೂಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಶೆಟ್ಟರ ಸ್ವಾಗತಿಸಿದರು. ಬಸಮ್ಮ ನರಸಾಪೂರ ನಿರೂಪಿಸಿದರು. ಶಿವಾನಂದ ಬಿಳೇಲಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.