ಬಾಗಲಕೋಟೆ: ಮೇಕೆದಾಟು ಯೋಜನೆ ಅನುಷ್ಠಾನ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪಾದಯಾತ್ರೆಯ ಹಿಂದೆ ರಾಜ್ಯದ ಜನರ ಹಿತದೃಷ್ಟಿ ಅಡಗಿಲ್ಲ. ಬದಲಿಗೆ ನಾಯಕತ್ವದ ಪೈಪೋಟಿಗೆ ಅದು ವೇದಿಕೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿವೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅದರಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ಹೀಗಾಗಿ ಪಾದಯಾತ್ರೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಸ್ಕ್ ಧರಿಸುವಂತೆ ಹಾಗೂ ಹೆಚ್ಚು ಜನ ಸೇರದಂತೆ ವಿನಂತಿಸುವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿ ಪಕ್ಷದವರ ಹಕ್ಕು. ಹೀಗಾಗಿ ಪಾದಯಾತ್ರೆಗೆ ಅಡ್ಡಿಪಡಿಸಿ ತೊಂದರೆ ಕೊಡುವ ಕೆಲಸ ಸರ್ಕಾರ ಮಾಡಿಲ್ಲ ಎಂದರು.
ತೀವ್ರ ಜ್ವರ ಕಾಣಿಸಿಕೊಂಡ ಕಾರಣ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯಿಂದ ವಾಪಸ್ ತೆರಳಿದರು ಎಂಬ ವಿಚಾರ ತಿಳಿದು ಆತಂಕವಾಯಿತು. ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿಶ್ರಾಂತಿ ಪಡೆಯಬೇಕು ಎಂದು ಕಾರಜೋಳ ಸಲಹೆ ನೀಡಿದರು.
ಪಾದಯಾತ್ರೆ ವಿಚಾರದಲ್ಲಿ ಸಾಮಾನ್ಯರಿಗೊಂದು, ಪ್ರತಿಪಕ್ಷ, ಆಡಳಿತ ಪಕ್ಷದವರಿಗೆ ಒಂದು ಕಾನೂನು ಇರಲ್ಲ. ದೇಶದ ಪ್ರಧಾನಿ ಮೊದಲುಗೊಂಡು ಸಾಮಾನ್ಯ ನಾಗರಿಕರವರೆಗೂ ಒಂದೇ ಕಾನೂನು ಇದೆ. ಸೂಕ್ಷ್ಮವಾಗಿ ಹೇಳುವೆ ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ ಎಂದು ಮಾರ್ಮಿಕವಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:
ಮೇಕೆದಾಟು: ಡಿಕೆಶಿ, ಸಿದ್ದರಾಮಯ್ಯ ಸೇರಿ 35 ಜನರ ವಿರುದ್ಧ ಪ್ರಕರಣ ದಾಖಲು
ಮೇಕೆದಾಟು: ಎರಡನೇ ದಿನದ ಪಾದಯಾತ್ರೆ ಆರಂಭ
ಮೇಕೆದಾಟು ಪಾದಯಾತ್ರೆ: ಕೋವಿಡ್ ಪರೀಕ್ಷೆ ನಿರಾಕರಿಸಿದ ಡಿ.ಕೆ. ಶಿವಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.