ADVERTISEMENT

ನಾವೇನು ನಟಿಯನ್ನು ಮದುವೆಯಾಗಿ ನಂತರ ಕೈಬಿಟ್ಟಿಲ್ಲ: ಎಚ್‌ಡಿಕೆಗೆ ಮುಲಾಲಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 12:59 IST
Last Updated 7 ಮಾರ್ಚ್ 2021, 12:59 IST
ರಾಜಶೇಖರ ಮುಲಾಲಿ
ರಾಜಶೇಖರ ಮುಲಾಲಿ   

ಬಾಗಲಕೋಟೆ: ‘ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಕೇರಳದ ವೈನಾಡಿಗೆ ಪದೇ ಪದೇ ಹೋಗ್ತಾರೆ ಎಂಬ ನನ್ನ ಹೇಳಿಕೆಗೆ ಎಚ್‌.ಡಿ. ಕುಮಾರಸ್ವಾಮಿ ಅವರೊಬ್ಬರೇ ಏಕೆ ಪ್ರತಿಕ್ರಿಯಿಸಿದರು’ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಭಾನುವಾರ ಇಲ್ಲಿ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಾಜಿ ಮುಖ್ಯಮಂತ್ರಿಯೊಬ್ಬರು ವೈನಾಡಿಗೆ ಹೋಗ್ತಿರೋದು ಸತ್ಯ. ನನಗೆ ಆ ಬಗ್ಗೆ ಖಚಿತ ಮಾಹಿತಿ ಇದೆ. ರಾಜ್ಯದಲ್ಲಿ ಏಳು ಮಂದಿ ಮಾಜಿ ಮುಖ್ಯಮಂತ್ರಿಗಳು ಬದುಕಿದ್ದಾರೆ. ಅವರ್ಯಾರೂ ಪ್ರತಿಕ್ರಿಯೆ ನೀಡಿಲ್ಲ. ಇವರಿಗ್ಯಾಕೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು ಏಕೆ’ ಎಂದರು.

‘ಕುಮಾರಸ್ವಾಮಿ ಮಾತಾಡುವಾಗ ತಾವೊಬ್ಬ ಮಾಜಿ ಸಿಎಂ ಎಂಬುದನ್ನು ಅರಿತು ಗೌರವದಿಂದ ಮಾತಾಡಬೇಕು. ಒದ್ದು ಒಳಗೆ ಹಾಕಿ, ಏರೋಪ್ಲೇನ್ ಏರಿಸಿ ಅಂದರೆ ಏನರ್ಥ? ಹೋರಾಟಗಾರರ ಬಗ್ಗೆ ಮಾತನಾಡೋವಾಗ ಸ್ವಲ್ಪ ಬಾಯಿ ಬಿಗಿ ಹಿಡಿದುಮಾತಾಡಬೇಕು. ಇದು ಅವರ ಸಂಸ್ಕಾರ ತೋರಿಸುತ್ತೆ’ಎಂದರು.

ADVERTISEMENT

ನಾವೇನು ಯಾವುದೋ ಚಿತ್ರನಟಿಯನ್ನು ಮದುವೆಯಾಗಿ ನಂತರ ಕೈಬಿಟ್ಟಿಲ್ಲ. ಇನ್ನೊಂದು ಮದುವೆ ಆಗೋದು.. ಅಂತಹವೇನು ಮಾಡಿಲ್ಲ. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಅಂದರೆ ತಿಳ್ಕೊಂಡು ಮಾತಾಡ್ಬೇಕುಎಂದು ಹೇಳಿದರು.

ನಾಳೆ ಮತ್ತೊಂದು ಕಡೆ ಇನ್ನೊಂದು ವಿಷಯ ಬಹಿರಂಗಪಡಿಸುತ್ತೇನೆ. ರಾಜಕಾರಣಿಗಳಿಗೆ ಸಂಬಂಧಿಸಿದ್ದು, ನಾಳೆ ಮಾತಾಡುತ್ತೇನೆ ಎಂದು ಹೇಳಿದ ಮುಲಾಲಿ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ಮುಗ್ಧರು. ಕುತಂತ್ರಗಳಿಗೆ ಬಲಿಯಾಗುತ್ತಿದ್ದಾರೆ. ಅದೊಂದು ದೊಡ್ಡ ಜಾಲವೇ ಇದೆ. ಅದಕ್ಕೆ ಗುರಿ ನಮ್ಮವರೇ ಆಗುತ್ತಿದ್ದಾರೆಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.