ಬಾಗಲಕೋಟೆ: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸುವ ಹೋರಾಟ ಹಾಗೂ ಕುರುಬ ಸಮಾವೇಶದಿಂದ ಸಿದ್ದರಾಮಯ್ಯ ದೂರ ಉಳಿದಿರುವುದಕ್ಕೆ ಕಾರಣ ಅವರನ್ನೇ ಕೇಳಿ ಎಂದು ಮಾಧ್ಯಮದವರಿಗೆ ಭಾನುವಾರ ಇಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದರು.
ಹೋರಾಟಕ್ಕೆ ಬನ್ನಿ ಎಂದು ಸಿದ್ದರಾಮಯ್ಯ ಅವರನ್ನು ನಾನು ನೂರು ಬಾರಿ ಕರೆದಿದ್ದೇನೆ. ಬರುತ್ತೇನೆ ಅಂನ್ನುತ್ತಾರೆ ಬರುವುದಿಲ್ಲ. ಬೆಂಬಲವಿದೆ ಅನ್ನುತ್ತಾರೆ. ಆದರೆ ಬರುವುದಿಲ್ಲ. ನಾವೇನು ಮಾಡೋಕೆ ಆಗುತ್ತೆ, ಬಲವಂತವಾಗಿ ಕರೆದುಕೊಂಡು ಬರೋಕೆ ಆಗುತ್ತಾ? ಎಳೆದುಕೊಂಡು ಬರೋಕೂ ಆಗೊಲ್ಲ. ಎಲ್ಲರೂ ಬಂದಿದ್ದಾರೆ. ಅವರು ನ್ಯಾಯಯುತವಾಗಿ ಬರಬೇಕಿತ್ತು ಎಂದರು.
ಕಾಂಗ್ರೆಸ್ ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಬಂದಿರುವವರು ಮಂತ್ರಿ ಆಗಬೇಕು ಎಂದು ಅಪೇಕ್ಷಿಸುವುದು ತಪ್ಪಲ್ಲ. ಸರ್ಕಾರ ರಚನೆಯ ವೇಳೆ ನಮ್ಮ ಪಕ್ಷದ ನಾಯಕರು ಅವರನ್ನು ಮಂತ್ರಿ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಅವರು ರಾಜಿನಾಮೆ ಕೊಟ್ಟು ಬರೆದಿದ್ದರೆ ನಮ್ಮ ಸರ್ಕಾರವೇ ಬರ್ತಿರಲಿಲ್ಲ. ಅವರ ಋಣ ತೀರಿಸಬೇಕಿದೆ, ತೀರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇತ್ತ ನಮ್ಮ ಶಾಸಕರು ಮಂತ್ರಿ ಸ್ಥಾನ ಕೇಳುತ್ತಿದ್ದಾರೆ.. ಚುನಾವಣೆ ವೇಳೆ ರಾಜ್ಯದ ಜನ ಪೂರ್ಣ ಬಹುಮತ ಕೊಟ್ಟಿದ್ರೆ ಈ ಗೊಂದಲ ಇರುತ್ತಿರಲಿಲ್ಲ. ರಾಜ್ಯದ ಜನ ಅಧಿಕಾರ ಮಾಡಿ ಎಂದು ಮತ ಹಾಕಿದರು. ಆದರೆ ಬಹುಮತ ಕೊಡಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.