ಬಾದಾಮಿ: ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಕೇಂದ್ರ ಗ್ರಂಥಾಲಯಕ್ಕೆ ಭಾನುವಾರ ಬೀಗ ಹಾಕಿದ್ದರಿಂದ ಓದುಗರು ಹೊರಗೆ ಕುಳಿತು ಓದುತ್ತಿರುವುದು ಕಂಡು ಬಂದಿತು.
ಶನಿವಾರವೂ ಗ್ರಂಥಾಲಯವನ್ನು ತೆರೆದಿಲ್ಲ. ಇಂದೂ ಕೂಡ ಬೇಗ ಬಾಗಿಲು ಹಾಕಲಾಗಿದೆ ಎಂದು ಓದುಗರಾದ ಉಮೇಶ ತಾಳಿಕೋಟಿ, ನಿಂಗಪ್ಪ ಬೆಳವಣಿಕಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಿತ್ಯ ನೂರಾರು ಕಾಲೇಜು ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರು ಗ್ರಂಥಾಲಯಕ್ಕೆ ಬರುವರು. ಗ್ರಂಥ ಪಾಲಕರು ಸರಿಯಾಗಿ ಬರುವುದಿಲ್ಲ’ ಎಂದು ಓದುಗರು ಆರೋಪಿಸಿದರು.
ವಾರದ ರಜೆ ಸೋಮವಾರವಿದೆ. ಪ್ರತಿ ತಿಂಗಳು ಎರಡನೇ ಮಂಗಳವಾರ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ. ನಿತ್ಯ ಬೆಳಿಗ್ಗೆ 8.30 ರಿಂದ 11.30, ಸಂಜೆ 4 ರಿಂದ ರಾತ್ರಿ 7.30 ರ ವರೆಗೆ ತೆರೆದಿರುತ್ತದೆ ಎಂದು ಫಲಕವನ್ನು ಹಾಕಿದ್ದಾರೆ. ಆದರೆ ಭಾನುವಾರ 12 ಆದರೂ ಬೀಗ ತೆರೆದಿಲ್ಲ ಎಂದರು.
ಗ್ರಂಥಪಾಲಕ ಸುನೀಲ ಮುದಗಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ಸೂಕ್ತ ಕ್ರಮ: ಎಚ್ಚರಿಕೆ
‘ಗ್ರಂಥ ಪಾಲಕರು ರಜೆ ಹಾಕಿಲ್ಲ. ಎರಡು ದಿನ ಗ್ರಂಥಾಲಯಕ್ಕೆ ಬಂದಿಲ್ಲವೆಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಅಧಿಕಾರಿ ಹಾಜೀರಾ ನಸ್ರೀಮ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಪಟ್ಟಣದ ಗ್ರಂಥಾಲಯವನ್ನು ಉನ್ನತೀಕರಿಸಲು ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಶಾಸಕರ ಸಲಹೆಯ ಮೇರೆಗೆ ಶೀಘ್ರವಾಗಿ ಉನ್ನತೀಕರಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.