ಬಾದಾಮಿ: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಸಮೀಪದಯರಗೊಪ್ಪ ಎಸ್. ಬಿ. ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ಎತ್ತು ಸತ್ತಿದೆ.
ರಾಘವೇಂದ್ರ ಹೊಸಮನಿ ರೈತರು ಹೊಲದಲ್ಲಿ ಎತ್ತಿನ ಕಟ್ಟಿದ್ದಾಗ ಸಿಡಿಲು ಬಡಿದಿದೆ. ಅಗಸ್ತ್ಯತೀರ್ಥ ಹೊಂಡದ ನೀರು ನುಗ್ಗಿ ಆರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲ್ಲೂಕಿನಲ್ಲಿ 12 ಮನೆಗಳು ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್ ಕಾವ್ಯಶ್ರೀ ಎಚ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬಾದಾಮಿ ಪಟ್ಟಣದಲ್ಲಿ 7.8 ಸೆ.ಮೀ. ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಿಂದಾಗಿ ಜೋಡಿ ಜಲಧಾರೆಗಳು ಧುಮ್ಮಿಕ್ಕುತ್ತಿವೆ.
ಅಗಸ್ತ್ಯತೀರ್ಥ ಹೊಂಡ ತುಂಬಿ ನೀರು ಹೊರ ಹರಿಯುತ್ತಿದ್ದು, ಪಟ್ಟಣದ ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು.
ಮನೆಗಳಲ್ಲಿ ನುಗ್ಗಿದ ನೀರನ್ನು ರಾತ್ರಿಯಿಡೀ ಸ್ವಚ್ಛತೆ ಕಾರ್ಯಮಾಡಿದರು. ‘2009ರಲ್ಲಿ ಈ ರೀತಿಯಾಗಿ ನೀರು ಬಂದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ನೀರು ಬಂದು ಮನೆಗೆ ನೀರು ನುಗ್ಗಿದೆ’ ಎಂದು ರೇಣಮ್ಮ ಹೇಳಿದರು.
ಹೊಂಡದ ನೀರು ಉಳ್ಳಾಗಡ್ಡಿ ಓಣಿ, ನೇಕಾರ ಓಣೆ, ಕಳ್ಳಿಪೇಟೆ ಬೀದಿಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಬಸ್ ನಿಲ್ದಾಣದ ಸಮೀಪದ ಹಳ್ಳದ ನೀರು ರಸ್ತೆ ಆವರಿಸಿಸಿತ್ತು. ಬಸ್ ನಿಲ್ದಾಣದಿಂದ ಅಂಚೆ ಕಚೇರಿವರೆಗಿನ ರಸ್ತೆ ಜಲಾವೃತವಾಗಿತ್ತು.
ಬಾಯಿ ಹಳ್ಳ, ಸಿದ್ದನಗವಿ ಹಳ್ಳದ ನೀರು ಮಕಾನ್ ಪ್ರದೇಶ, ಸದಾಶಿವನಗರ ಹಾಗೂ ಚಾಲುಕ್ಯ ನಗರದ ರಸ್ತೆಗಳಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಜನರಿಗೆ ತೊಂದರೆಯಾಯಿತು. ವಾಹನಗಳ ಸಂಚಾರವೂ ಕಷ್ಟವಾಗಿತ್ತು.
ಬಾಗಲಕೋಟೆಯಲ್ಲಿಯೂ ಭಾನುವಾರ ರಾತ್ರಿ, ಸೋಮವಾರ ಸಂಜೆ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.