ಬಾಗಲಕೋಟೆ: ನಗರ, ಬಾದಾಮಿ, ರಬಕವಿ–ಬನಹಟ್ಟಿ, ಕೆರೂರು, ಹುನಗುಂದ, ಬೀಳಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಜೋರಾದ ಮಳೆಯಾಗಿದೆ. ಬಾದಾಮಿ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಗುರುವಾರವೂ ಮಳೆಯಾಗಿದೆ.
ಸಂಜೆ ಆರಂಭವಾದ ಮಳೆಯೂ ಮಧ್ಯರಾತ್ರಿಯವರೆಗೂ ಧಾರಾಕಾರವಾಗಿ ಸುರಿಯಿತು. ಬೆಳಿಗ್ಗೆ ಸೆಕೆಯಿತ್ತು. ಮಧ್ಯಾಹ್ನದ ವೇಳೆಗೆ ಮೋಡ ಕವಿದು ಅಲ್ಲಲ್ಲಿ ಮಳೆಯಾಯಿತು. ಸಂಜೆಯ ವೇಳೆಗೆ ಜಿಲ್ಲೆಯ ಬಹುತೇಕ ಕಡೆ ಮಳೆ ಸುರಿಯಿತು.
ಬಾಗಲಕೋಟೆ ತಾಲ್ಲೂಕಿನ ಸಿಕ್ಕೇರಿ ಗ್ರಾಮದ ಕೆಲವು ಹೊಲಗಳಲ್ಲಿ ಬೆಳೆದ ಈರುಳ್ಳಿ ಬೆಳೆ ನೀರಿನಲ್ಲಿ ನಿಂತಿದೆ. ಮಳೆಯಿಂದ ಬೆಳೆ ಹಾಳಾಗುವ ಭೀತಿ ಎದುರಾಗಿದೆ.
ಬಾದಾಮಿ ಸುತ್ತ–ಮುತ್ತಲ ಪ್ರದೇಶದಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲಿಗೆ ಮುತ್ತಲಗೇರಿಯ ಮುದಿಯಪ್ಪ ಮೇಗೂರು ಎಂಬುವವರ ಎರಡು ಎತ್ತುಗಳು ಸಾವನ್ನಪ್ಪಿವೆ.
ಅಗಸ್ತ್ಯತೀರ್ಥ ಹೊಂಡ ತುಂಬಿ ಹರಿಯುತ್ತಿರುವುದರಿಂದ ಬಾದಾಮಿಯ ಕೆಲವು ಪ್ರದೇಶಗಳಲ್ಲಿ ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಜನರು ಅದರಲ್ಲೇ ಸಂಚರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.