ಇಳಕಲ್: 'ಕಲ್ಯಾಣ ಕೇಂದ್ರವಾಗಿಸಿಕೊಂಡು 12ನೇ ಶತಮಾನದಲ್ಲಿ ನಡೆದ ಬಸವಣ್ಣನವರ ನೇತೃತ್ವದ ವೈಚಾರಿಕ ಹಾಗೂ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ಪಾತ್ರ ಅತ್ಯಂತ ಹಿರಿದಾಗಿದೆʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಅಂಗವಾಗಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸಾಮಾಜಿಕ ಚಳವಳಿಯ ಅಗ್ರನಾಯಕರಲ್ಲಿ ಒಬ್ಬರಾಗಿದ್ದ ಮಡಿವಾಳ ಮಾಚಿದೇವರು ಶರಣ ಸಂಸ್ಕೃತಿಯ ಗಣಾಚಾರ ತತ್ವದ ಪ್ರತಿನಿಧಿಯಾಗಿದ್ದಾರೆ. ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ಸುಟ್ಟು ಹಾಕುವ ಕೆಟ್ಟ ಕೆಲಸ ನಡೆಯಿತು. ಇಂತಹ ಆಪತ್ತಿನ ಸಂದರ್ಭದಲ್ಲಿ ದಿಟ್ಟತನದಿಂದ ಹೋರಾಡಿ ವಚನಗಳ ಸಂರಕ್ಷಣೆ ಮಾಡಿದವರು ವೀರಗಣಾಚಾರಿ ಮಾಚಿದೇವರು. ಅವರ ಅಂದಿನ ಹೋರಾಟದ ಫಲವಾಗಿ ಇವತ್ತು ವಚನ ಸಾಹಿತ್ಯ ಉಳಿದು, ಬೆಳೆದಿದೆʼ ಎಂದರು.
ಮುಖಂಡರಾದ ಶರಣಪ್ಪ ಆಮದಿಹಾಳ, ಮಲ್ಲು ಮಡಿವಾಳರ, ವಿಜಯ ಮಹಾಂತೇಶ ಮಡಿವಾಳರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.