ಮಹಾಲಿಂಗಪುರ: ಸಮೀಪದ ಬಿಸನಾಳ ಗ್ರಾಮದಲ್ಲಿ ಬನ್ನೆಮ್ಮದೇವಿ ಜಾತ್ರೆ ಹಾಗೂ ಮಾರುತೇಶ್ವರ ಓಕಳಿ ಅಂಗವಾಗಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶನಿವಾರ ಬನ್ನಿಗಿಡದಿಂದ ಸಕಲ ವಾದ್ಯಗಳೊಂದಿಗೆ ಕುಂಭಮೇಳ ನಡೆಯಿತು. ನಂತರ ಹಾಲಗಂಬ (ದೀಪಸ್ತಂಭ) ಉದ್ಘಾಟನೆಯನ್ನು ಮುಖಂಡರು ನೆರವೇರಿಸಿದರು. ಹೋಮ ಹವನ ಪೂಜೆ, ಮಾರುತೇಶ್ವರ ಕೊಂಡಪೂಜೆ ಹಾಗೂ ಕಾರ್ಖಾನೆ ಮೈದಾನದಲ್ಲಿ ತೆರಬಂಡಿ ಸ್ಪರ್ಧೆ ನಡೆಯಿತು.
ಭಾನುವಾರ ಅರಣ್ಯದೇವಿ ದೇವಸ್ಥಾನದಿಂದ ಹಮ್ಮಿಕೊಂಡ ನಿಮಿಷದ ಬಂಡಿ ಸ್ಪರ್ಧೆಗೆ ಮುಖಂಡ ಸಿದ್ದು ಕೊಣ್ಣೂರ ಚಾಲನೆ ನೀಡಿದರು. ನಂತರ ನಡುಓಕಳಿ ನಡೆಯಿತು. ರಾತ್ರಿ ಮಾಳಿಂಗರಾಯನ ಗಾಯನ ಸಂಘದಿಂದ ಡೊಳ್ಳಿನ ಪದಗಳ ಪ್ರದರ್ಶನ ನಡೆಯಿತು. ಸೋಮವಾರ ದೇವಿಗೆ ಅಭಿಷೇಕ, ಮತ್ತೈದೆಯರಿಗೆ ಉಡಿ ತುಂಬುವ ಹಾಗೂ ಸಕಲ ವಾದ್ಯಗಳೊಂದಿಗೆ ಸುತ್ತಲಿನ ದೇವರಿಗೆ ನೈವೇದ್ಯ ಕೊಡುವ ಕಾರ್ಯಕ್ರಮ, ಸಂಜೆ ಕಡೆ ಓಕಳಿ ಮತ್ತು ಕುಸ್ತಿ ಪಂದ್ಯಾವಳಿಗಳು ನಡೆದವು.
ಬಸವರಾಜ ಮರನೂರ, ಪ್ರಕಾಶ ಚನ್ನಾಳ, ದುಂಡಪ್ಪ ಚನ್ನಾಳ, ಹಣಮಂತ ಚನ್ನಾಳ, ಮಲ್ಲಪ್ಪ ಭದ್ರಶೆಟ್ಟಿ, ಬಸಪ್ಪ ಚನ್ನಾಳ, ಹಣಮಂತ ಉಳ್ಳಾಗಡ್ಡಿ, ಲಾಲಸಾಬ ಪೆಂಡಾರಿ, ಮಹಾಲಿಂಗ ನಾಯಕ, ಅಶೋಕ ಮೂಡಲಗಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.