
ವಿಶ್ವಜ ಕಾಡದೇವರ
ರಬಕವಿಬನಹಟ್ಟಿ (ಬಾಗಲಕೋಟೆ ಜಿಲ್ಲೆ): ರಬಕವಿ ಬನಹಟ್ಟಿ ವ್ಯಾಪ್ತಿಯಲ್ಲಿ ಬೆಳೆದ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೇ, ರೈತರು ಪರದಾಡುವಂತಾಗಿದೆ.
ಮಹಾರಾಷ್ಟ್ರದ ಅಡತಿಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 1,890 ದರ ನಿಗದಿಯಾಗಿದ್ದರೆ, ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ₹ 1,700ಕ್ಕೆ ಕುಸಿದಿದೆ. ಕಳೆದ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಮೆಕ್ಕೆಜೋಳ ಕ್ವಿಂಟಲ್ಗೆ ₹ 3,000ದಿಂದ ₹ 3,100ರವರೆಗೆ ಮಾರಾಟವಾಗಿತ್ತು’ ಎಂದು ರೈತ ಸದಾಶಿವ ಬಂಗಿ ತಿಳಿಸಿದರು.
‘ಸರ್ಕಾರ ಸಾಧ್ಯವಾದಷ್ಟು ಬೇಗ ಬೆಂಬಲ ಬೆಲೆ ಘೋಷಿಸಿ, ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗಲಿದೆ’ ಎಂದು ರೈತ ಸಿದ್ದು ಗೌಡಪ್ಪನವರ ಆತಂಕ ವ್ಯಕ್ತಪಡಿಸಿದರು.
‘ಕಾಳು ಖರೀದಿ, ಗೊಬ್ಬರ, ಔಷಧ ಸೇರಿದಂತೆ ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಕೃಷಿಗೆ ಅಂದಾಜು ₹ 35 ಸಾವಿರ ಖರ್ಚಾಗುತ್ತದೆ. ಆದರೆ, ಬೆಲೆ ಹೀಗೆ ಕುಸಿದರೆ ಏನು ಮಾಡುವುದು? ನಮಗೆ ದಿಕ್ಕೇ ತೋಚುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.
‘ಮೆಕ್ಕೆಜೋಳದಿಂದ ಇಥೆನಾಲ್ ಉತ್ಪಾದಿಸಲಾಗುತ್ತಿದೆ. ರಫ್ತು ಆಗುತಿತ್ತು. ಈಗ ಎರಡೂ ಸ್ಥಗಿತಗೊಂಡಿದೆ. ಈ ಬಾರಿ ಉತ್ತಮ ಇಳುವರಿ ಬಂದಿದೆ. ಅದರೆ ಬೆಲೆ ಕುಸಿದಿದೆ’ ಎಂದರು.
ರಬಕವಿ ವ್ಯಾಪ್ತಿಯಲ್ಲಿ 80 ಕ್ವಿಂಟಲ್ಗೂ ಹೆಚ್ಚು ಮೆಕ್ಕೆಜೋಳ ದಾಸ್ತಾನಿದೆ. ಸೂಕ್ತ ಬೆಲೆ ಇಲ್ಲ. ಅವುಗಳ ರಕ್ಷಣೆಯೇ ಸಮಸ್ಯೆಯಾಗಿದೆ.ಧರೆಪ್ಪ ಉಳ್ಳಾಗಡ್ಡಿ ರೈತ
ಮೆಕ್ಕೆಜೋಳ ಖರೀದಿಗೆ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿಲ್ಲ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಬೆಂಬಲ ಬೆಲೆ ಕ್ವಿಂಟಲ್ಗೆ ₹ 2400 ನಿಗದಿ ಅಗಿದೆ.ವಿ.ಡಿ.ಪಾಟೀಲ ಕೃಷಿ ಮಾರಾಟ ಸಹಾಯಕ ನಿರ್ದೇಶಕ ಎಪಿಎಂಸಿ ಬಾಗಲಕೋಟೆ
ಇಂದು ಲಕ್ಷ್ಮೇಶ್ವರ ಬಂದ್
ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ಮೆಕ್ಕೆಜೋಳ ಖರೀದಿಗೆ ಕೇಂದ್ರ ಆರಂಭಕ್ಕೆ ಆಗ್ರಹಿಸಿ ರೈತರು ಐದು ದಿನದಿಂದ ಲಕ್ಷ್ಮೇಶ್ವರದ ಶಿಗ್ಲಿ ಕ್ರಾಸ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಗುರುವಾರ ಲಕ್ಷ್ಮೇಶ್ವರ ಬಂದ್ಗೆ ಕರೆ ಕೊಟ್ಟಿದ್ದಾರೆ. ‘ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕ್ವಿಂಟಲ್ಗೆ ₹ 1700 ರಿಂದ ₹1400ಕ್ಕೆ ಕುಸಿದಿದೆ. ಸರ್ಕಾರ ತಕ್ಷಣವೇ ಖರೀದಿ ಕೇಂದ್ರ ತೆರೆದು ರೈತರಿಗೆ ನೆರವಾಗಬೇಕು’ ಎಂದು ರೈತ ಮುಖಂಡ ಮಂಜುನಾಥ ಮಾಗಡಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.