ADVERTISEMENT

ಮೇದಾರ ಕೇತೇಶ್ವರ ಜ್ಯೋತಿಯಾತ್ರೆ ಜ.21ಕ್ಕೆ

ಜಿಲ್ಲಾ ಮಟ್ಟದ ಸಮಾವೇಶ: ಡಿಸಿಎಂ ಗೋವಿಂದ ಕಾರಜೋಳ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 11:10 IST
Last Updated 16 ಜನವರಿ 2020, 11:10 IST

ಬಾಗಲಕೋಟೆ: ಬೀದರ್ ಜಿಲ್ಲೆ ಚಿದ್ರಿ ಗ್ರಾಮದಲ್ಲಿರುವ ಮಹಾಶರಣ ಮೇದಾರ ಕೇತೇಶ್ವರರ ಐಕ್ಯಮಂಟಪದಿಂದ ಹೊರಟಿರುವ ಜ್ಯೋತಿ ಯಾತ್ರೆ ಜನವರಿ 21ರಂದು ಬಾಗಲಕೋಟೆಗೆ ಬರುತ್ತಿದೆ. ಅಂದು ನಗರದಲ್ಲಿ ಜಿಲ್ಲೆಯ ಮೇದಾರ ಸಮಾಜದಿಂದ ಯಾತ್ರೆಯನ್ನು ಇದಿರುಗೊಳ್ಳಲಾಗುವುದು ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಪ್ಪ ಮೇದಾರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ದಿನಗಳ ಕಾಲ ನಾಡಿನಾದ್ಯಂತ ಸಂಚರಿಸಿ ಮಾರ್ಚ್ 23ರಂದು ಚಿತ್ರದುರ್ಗದ ಸಿಬಾರದಲ್ಲಿರುವ ಮೇದಾರ ಕೇತೇಶ್ವರ ಗುರುಪೀಠದಲ್ಲಿ ಜ್ಯೋತಿ ಯಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.

ಬೃಹತ್ ಮೆರವಣಿಗೆ; ಜನವರಿ 21ರಂದು ಮೇದಾರ ಸಮಾಜದ ಕುಲಗುರು ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ನಗರದಲ್ಲಿ ಜ್ಯೋತಿ ಯಾತ್ರೆಯಲ್ಲಿ ಹೆಜ್ಜೆ ಹಾಕಲಾಗುವುದು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಝಾಂಜ್ ಪಥಕ್, ಕರಡಿ ಮಜಲು ವಾದ್ಯ ತಂಡಗಳು ಭಾಗವಹಿಸಲಿವೆ. ಮಾರವಾಡಿ ಗಲ್ಲಿ, ಅಡತಬಜಾರ, ಮಾಬುಸುಬಾನಿ ದರ್ಗಾ ಸರ್ಕಲ್,‍ಪಂಖಾ ಮಸೀದಿ, ವಲ್ಲಭಬಾಯಿ ಚೌಕ, ಸ್ಟೇಷನ್ ರಸ್ತೆ ಮೂಲಕ ಬಸವೇಶ್ವರ ಸರ್ಕಲ್ ಮಾರ್ಗವಾಗಿ ಚರಂತಮಠದ ಶಿವಾನುಭವ ಮಂಟಪ ತಲುಪಲಿದೆ ಎಂದರು.

ADVERTISEMENT

ಅಲ್ಲಿ ನಡೆಯಲಿರುವ ಜಿಲ್ಲೆಯ ಪ್ರಥಮ ಮೇದಾರ ಸಮಾವೇಶವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ.ಗದ್ದಿಗೌಡರ, ಚಿತ್ರದುರ್ಗದ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಪಾಟೀಲ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ ಬುಡ್ಡರ, ಸದಸ್ಯರಾದ ಹನುಮಂತ ಬುಡ್ಡರ, ಚನ್ನಬಸು ಬುಡ್ಡರ, ಮಲ್ಲಿಕಾರ್ಜುನ ಜೈನಾಪುರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.