
ಇಳಕಲ್: ‘ವಿದ್ಯಾರ್ಥಿಗಳಿಗೆ ಶಿಕ್ಷಣ, ತರಬೇತಿ ನೀಡಿ, ದೇಶದ ಮಾನವ ಸಂಪನ್ಮೂಲ ವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಕರ ಪಾತ್ರ ಹಿರಿದು’ ಎಂದು ಕೊಡಗು ಜಿಲ್ಲೆ ಕುಶಾಲನಗರದ ಅರಣ್ಯಾಧಿಕಾರಿ ಐಶ್ವರ್ಯ ರಾಮನಗೌಡ ಗೌಡರ ಹೇಳಿದರು.
ಇಲ್ಲಿಯ ವಿಜಯ ಮಹಾಂತೇಶ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಕ್ಕಳ ಪ್ರತಿಭೆ ಗುರುತಿಸಿ, ಸರ್ವತೋಮುಖ ಅಭಿವೃದ್ಧಿ ಮಾಡುವ ಶಿಕ್ಷಕರು ಸದಾ ಸ್ಮರಣೀಯರು. ಹಾಗೆಯೇ ಈ ಭಾಗದ ಜನಸಾಮಾನ್ಯರಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಿ.ಎಸ್.ವಿ.ಎಂ ಸಂಸ್ಥೆಯ ಕಾರ್ಯವೂ ಶ್ಲಾಘನಾರ್ಹವಾಗಿದೆ’ ಎಂದರು.
ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀ, ಶಿರೂರಿನ ಬಸವಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಕಾರ್ಯಾಧ್ಯಕ್ಷ ಗುರಣ್ಣ ಮರಟದ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ದಿಯಾ ಚವ್ಹಾಣ ಅವರಿಗೆ ಮಂಜುನಾಥ ಹರಿಹರ ಸ್ಮರಣಾರ್ಥದ ಬಂಗಾರದ ಪದಕ ನೀಡಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ಎ.ಎಸ್.ಮಠದ, ಡಿ.ಎಸ್.ಅಂಗಡಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಸಂಗಣ್ಣ ಆರ್. ಕಂಪ್ಲಿ ಇದ್ದರು.
ತನುಶ್ರೀ ಕಠಾರೆ, ಅನುಷಾ ಚಟ್ಟೇರ್ ನಿರೂಪಿಸಿದರು. ಐಶ್ವರ್ಯ ಅಂಗಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.