ADVERTISEMENT

ರಬಕವಿ ಬನಹಟ್ಟಿ: ಲಸಿಕೆ ಪ್ರತ್ಯೇಕ ಹಂಚಿಕೆ ಮಾಡಿ-ಶಾಸಕ ಸಿದ್ದು ಸವದಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 16:40 IST
Last Updated 19 ಜೂನ್ 2021, 16:40 IST
ಬನಹಟ್ಟಿಯ ಎಸ್‍ಆರ್‌ಎ ಮೈದಾನದಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಬನಹಟ್ಟಿಯ ಎಸ್‍ಆರ್‌ಎ ಮೈದಾನದಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ತಾಲ್ಲೂಕಿಗೆ ಪ್ರತ್ಯೇಕವಾಗಿ ಲಸಿಕೆಯನ್ನು ಹಂಚಿಕೆ ಮಾಡಬೇಕು. ಇದರಿಂದ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ ಕ್ಷೇತ್ರಗಳನ್ನು ಗಮನಿಸಿದರೆ ರಬಕವಿ ಬನಹಟ್ಟಿ ತಾಲ್ಲೂಕಿಗೆ ಕಡಿಮೆ ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿಗೆ ಲಸಿಕೆಯನ್ನು ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಶಾಸಕ ಸಿದ್ದು ಸವದಿ ಆಗ್ರಹಿಸಿದರು.

ಎಸ್‍ಆರ್‌ಎ ಮೈದಾನದಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಜಿಲ್ಲಾ ಆರೋಗ್ಯಾಧಿಕಾರಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರು.

ಇದೇ 21 ರಂದು ಕ್ಷೇತ್ರದ ವ್ಯಾಪ್ತಿಯಲ್ಲಿ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗುವುದು. ಈ ನಿಮಿತ್ತವಾಗಿ ಸ್ಥಳೀಯ ಎಸ್ಆರ್‌ಎ ಮೈದಾನದ ಜೊತೆಗೆ ಅವಳಿ ನಗರದಲ್ಲಿ ನಾಲ್ಕೈದು ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ಲಸಿಕೆಯನ್ನು ನೀಡಲಾಗುವುದು. ಇದೇ ಕಾರ್ಯವನ್ನು ಕ್ಷೇತ್ರದ ಮಹಾಲಿಂಗಪುರ, ಹೊಸೂರ ಹಾಗೂ ರಾಮಪುರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ADVERTISEMENT

ಶನಿವಾರ ಕ್ಷೇತ್ರಕ್ಕೆ 18 ವರ್ಷ ಮೇಲ್ಪಟ್ಟವರಿಗಾಗಿ 750 ಹಾಗೂ 45 ವರ್ಷ ಮೇಲ್ಪಟ್ಟವರಿಗಾಗಿ 450 ಡೋಸ್‍ ಲಸಿಕೆ ಬಂದಿದೆ. 18 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಬಂದರೆ ವಾರ್ಡ್‍ಗಳಲ್ಲಿ ಲಸಿಕಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಗ್ರಾಮೀಣ ಪ್ರದೇಶದ ಜನರು ಲಸಿಕೆ ಪಡೆದುಕೊಳ್ಳಲು ಬರುತ್ತಿಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟು ಜಾಗೃತಿ ಅಗತ್ಯವಾಗಿದೆ ಎಂದು ಸವದಿ ತಿಳಿಸಿದರು.

ತಹಶೀಲ್ದಾರ್ ಸಂಜಯ ಇಂಗಳೆ, ಟಿಎಚ್‌ಒ ಡಾ.ಜಿ.ಎಚ್.ಗಲಗಲಿ, ಸಿಪಿಐ ಜಿ.ಕರುಣೇಶಗೌಡ, ಸಹಾಯಕ ಆರೋಗ್ಯಾಧಿಕಾರಿ ಅಪ್ಪಾಜಿ ಹೂಗಾರ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.