ADVERTISEMENT

ರಾಜ್ಯದ ರೈತರಿಗೆ ಕೇಂದ್ರದ ಮಲತಾಯಿ ಧೋರಣೆ: ವಿಜಯಾನಂದ ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:42 IST
Last Updated 7 ಜನವರಿ 2026, 6:42 IST
ಹುನಗುಂದ ಎಪಿಎಂಸಿ ಆವರಣದಲ್ಲಿರುವ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಎಫ್ಎಕ್ಯು ಗುಣಮಟ್ಟದ ತೊಗರಿ ಖರೀದಿಗೆ ಚಾಲನೆ ನಿಡುವ ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು
ಹುನಗುಂದ ಎಪಿಎಂಸಿ ಆವರಣದಲ್ಲಿರುವ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಎಫ್ಎಕ್ಯು ಗುಣಮಟ್ಟದ ತೊಗರಿ ಖರೀದಿಗೆ ಚಾಲನೆ ನಿಡುವ ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು   

ಹುನಗುಂದ: ‘ಕೇಂದ್ರ ಸರ್ಕಾರ ರಾಜ್ಯದ ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಎಫ್ಎಕ್ಯು ಗುಣಮಟ್ಟದ ತೊಗರಿ ಖರೀದಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಈವರಗೂ ಬೆಳೆ ಹಾನಿಗೆ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿದ್ದಾರೆ. ಹುನಗುಂದ ಮತ್ತು ಇಳಕಲ್ ತಾಲ್ಲೂಕಿನಲ್ಲಿ ಹೆಚ್ಚು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿತ್ತು. ಹೀಗಾಗಿ ಎರಡು ತಾಲ್ಲೂಕುಗಳಲ್ಲಿ ಒಟ್ಟು 17 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಬಾರಿ ತೊಗರಿ ಖರೀದಿಯನ್ನು ಬೇಗ ಆರಂಭಿಸಲಾಗಿದ್ದು, ರೈತರು ಬೆಂಬಲ ಬೆಲೆ ಪ್ರಯೋಜನೆ ಪಡೆಯಬೇಕು’ ಎಂದರು.

ADVERTISEMENT

ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಆರ್.ಎಂ. ದಂಡಿನ ಮಾತನಾಡಿ, ‘ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್ ತೊಗರಿಗೆ ₹8,000 ನಿಗದಿ ಪಡಿಸಲಾಗಿದೆ. ಪ್ರತಿ ಎಕರೆಗೆ 4 ಕ್ವಿಂಟಲ್ ಖರೀದಿ ಮಾಡಲಾಗುತ್ತಿದೆ. ಈಗಾಗಲೇ ಪಟ್ಟಣದ ಟಿಎಪಿಸಿಎಂಸಿ ತೊಗರಿ ಖರೀದಿ ಕೇಂದ್ರ ಸೇರಿದಂತೆ ಎರಡು ತಾಲ್ಲೂಕುಗಳಲ್ಲಿ ತೊಗರಿ ಮಾರಾಟ ಮಾಡಲು ಒಟ್ಟು 4,929 ರೈತರು ನೋಂದಣಿ ಮಾಡಿದ್ದಾರೆ’ ಎಂದರು.

ಟಿಎಪಿಸಿಎಂಸಿ ಅಧ್ಯಕ್ಷ ಜೈನಸಾಬ್ ಹಗೇದಾಳ, ‘ಈ ಬಾರಿ ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗಿ ತೊಗರಿ ಬೆಳೆ ಹಾಳಾಗಿದೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿ ರಾಜ್ಯ ಸರ್ಕಾರ ರೈತರಿಗೆ ₹450 ಸಹಾಯಧನ ನೀಡಬೇಕು’ ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.

ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಂಜೀವ್ ಜೋಶಿ, ಮುಖಂಡರಾದ ಶೇಖರಪ್ಪ ಬಾದವಾಡಗಿ, ಪ್ರಭು ಇದ್ದಲಗಿ, ಬಸವರಾಜ ಗದ್ದಿ, ಸಂಗಣ್ಣ ಗಂಜಿಹಾಳ, ಮಹಾಂತೇಶ ನಾಡಗೌಡ, ಮಹಾಲಿಂಗಯ್ಯ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.