ಮುಧೋಳ: ಬಡವರು, ವಿಧವೆಯರು, ದೀನ-ದಲಿತರು ಸಹ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಸಹಾಯಕಾರಿ ಆಗಿವೆ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಹೇಳಿದರು.
ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಜಿಲ್ಲಾ ಪಂಚಾಯ್ತಿ ಬಾಗಲಕೋಟೆ, ಮತ್ತು ತಾ.ಪಂ ಸಹಯೋಗದಲ್ಲಿ 2021-22ನೇ ಸಾಲಿನ ಬಸವ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ (ಹೆಚ್ಚುವರಿ) ಅಡಿ ಅರ್ಹ ಫಲಾನುಭವಿಗಳಿಗೆ ಶನಿವಾರ ಕಾಮಗಾರಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಬರಗಾಲ ನಿರ್ವಹಣೆಗೆ ಸಿದ್ಧತೆ: ಪ್ರಕೃತಿ ವಿಕೋಪದಿಂದ ಕಳೆದ ಬಾರಿ ಮಳೆ ಪ್ರಮಾಣ ಕಡಿಮೆ ಆದ ಕಾರಣ ನೀರಿನ ಅಭಾವ ಹೆಚ್ಚಾಗುತ್ತಿದೆ. ಸರ್ಕಾರದಿಂದ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನಗರದ ಬೈಪಾಸ್ ರಸ್ತೆಗೆ ₹10 ಕೋಟಿ, ನಗರದ ಉದ್ಯಾನ ಅಭಿವೃಧ್ಧಿಗಾಗಿ ₹5 ಕೋಟಿ, ಕುಡಿಯುವ ನೀರಿಗೆ ₹1.5 ಕೋಟಿ, ಹೀಗೆ ವಿವಿಧ ಗ್ರಾಮಗಳ ಅಭಿವೃದ್ಧಿಗಾಗಿ ಒಟ್ಟು ₹36 ಕೋಟಿ ಅನುದಾನ ಬಿಡುಗಡೆ ಆಗಿದೆ. ಅಭಿವೃಧ್ಧಿ ಕಾಮಗಾರಿಗಳಿಗೂ ಹಣದ ಕೊರತೆ ಇಲ್ಲ ಎಂದು ಹೇಳಿದರು.
ತಹಶೀಲ್ದಾರ್ ವಿನೋದ ಹತ್ತಳ್ಳಿ, ತಾಲ್ಲೂಕು ಪಂಚಾಯ್ತಿ ಇಒ ಅಧಿಕಾರಿ ಸಂಜಿವ ಹಿಪ್ಪರಗಿ, ಅಧಿಕಾರಿಗಳು, ಮುಖಂಡರು ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.