ರಾಂಪುರ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜನರಲ್ಲಿ ಮತದಾನದ ಮಹತ್ವ ಕುರಿತು ಸಮೀಪದ ಶಿರೂರ ಪಟ್ಟಣದಲ್ಲಿ ಶುಕ್ರವಾರ ಓಣಿ ಓಣಿಗೆ ತೆರಳಿ ಮತದಾರರಿಗೆ ಜಾಗೃತಿ ಮೂಡಿಸಲಾಯಿತು.
ಪಟ್ಟಣ ಪಂಚಾಯತಿ ವತಿಯಿಂದ ನಡೆದ ಜಾಗೃತಿ ಅಭಿಯಾನದಲ್ಲಿ ಡೊಳ್ಳು, ಬಾಜಾ ಭಜಂತ್ರಿಯೊಂದಿಗೆ ನಾಗರಿಕರು, ಪಟ್ಟಣ ಪಂಚಾಯತಿ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿ ಪ್ರತಿ ಓಣಿಯಲ್ಲಿ ವಿವಿಧ ಘೋಷವಾಕ್ಯಗಳನ್ನು ಬಿತ್ತರಿಸಿ ಮತದಾನದ ಮಹತ್ವ ಸಾರಲಾಯಿತು.
ಪಟ್ಟಣ ಪಂಚಾಯ್ತಿ ಕಚೇರಿ ಎದುರು ಜಾಗೃತಿ ಜಾಥಾದ ವಾಹನಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯ್ತಿ ಪ್ರಭಾರ ಮುಖ್ಯಾಧಿಕಾರಿ ಯು.ಜಿ.ವರದಪ್ಪನವರ, ಮತದಾನ ಮಾಡುವುದು ಪ್ರತಿಯೊಬ್ಬ ಅರ್ಹ ಮತದಾರರ ಕರ್ತವ್ಯವಾಗಿದ್ದು, ಮೇ 7ರಂದು ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯಬೇಕು ಎಂದರು.
ನಂತರ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ದೀಪ ಬೆಳಗಿಸಿ ನನ್ನ ಮತ ನನ್ನ ಹಕ್ಕು ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು. ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಆರೋಗ್ಯ ಇಲಾಖೆಯ ಕೆ.ಎಫ್.ಮಾಯಾಚಾರಿ, ಪ್ರಶಾಂತ ಬೂದಿಹಾಳ, ಹನಮಂತ ಚನ್ನದಾಸರ, ಸೋಮನಾಥ ಕುರಿಗಾರ, ಬಿ.ಜಿ.ಹಿರೇಮಠ, ಹನಮಂತ ಹಳ್ಳಿ, ಸುನಿತಾ ಮೆಣಸಗಿ, ಅನಿಲ ಪೂಜಾರಿ, ಪೌರ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.