ಕೆರೂರ: ಇಲ್ಲಿನ ಹೊಸಪೇಟೆ ಓಣಿಯ ಶ್ರೀ ಬನಶಂಕರಿ ದೇವಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ವೈವಿಧ್ಯಮಯ ಧಾರ್ಮಿಕ ಆಚರಣೆಗಳು ಸಡಗರ, ಸಂಭ್ರಮದಿಂದ ನೆರವೇರುತ್ತಿವೆ.
ಶುಕ್ರವಾರ ರಾತ್ರಿ ದೇವಾಲಯದ ವಿಶಾಲ ಆವರಣದಲ್ಲಿ ಮೊದಲು ಪ್ರಕೃತಿ ಚಿಕಿತ್ಸಕ ವಾಸನದ ಡಾ.ಹನಮಂತ ಮಳಲಿ ಹಾಗೂ ದೇವಾಂಗಮಠದ ರುದ್ರಮುನಿ ಸ್ವಾಮೀಜಿ ದಂಪತಿ ನೇತೃತ್ವದಲ್ಲಿ ಗೋವು ಪೂಜೆ ನೆರವೇರಿಸಲಾಯಿತು.
ನಂತರ ಪಟ್ಟಣವು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಂದ ಉತ್ಸಾಹದಿಂದ ಆಗಮಿಸಿದ್ದ ಸಹಸ್ರಾರು ಮಹಿಳೆಯರಿಗೆ ದೇವಸ್ಥಾನ ಸಮಿತಿ ಹಾಗೂ ದೇವಾಂಗ ಸಮಾಜದ ಸಹಯೋಗದಲ್ಲಿ ಶಾಸ್ತ್ರೋಕ್ತ ವಾಗಿ ಉಡಿ ತುಂಬುವ ಉತ್ಸವ ಹಾಗೂ ಪ್ರಸಾದ ವಿತರಣೆ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೊರೊನಾ ಹಾವಳಿ, ನದಿಗಳ ಪ್ರವಾಹದಿಂದ ನಲುಗುತ್ತಿರುವ ಜನತೆಯನ್ನು ಹಾಗೂ ಅತ್ಯಧಿಕ ಮಳೆಯ ಹೊಡೆತದಿಂದ ಬೆಳೆ ಹಾನಿ, ಬಿತ್ತನೆ ಮಾಡದೇ ಕಂಗಾಲಾಗಿರುವ ಕೃಷಿಕರ ಬದುಕನ್ನು ರಕ್ಷಿಸಿ ಮತ್ತೆ ಸುಖ, ಸಮೃದ್ಧಿಯನ್ನು ದಯ
ಪಾಲಿಸುವಂತೆ ಶಕ್ತಿ ಮಾತೆಯಲ್ಲಿ ಅನೇಕರು ಪ್ರಾರ್ಥಿಸಿದರು. ಆಚರಣೆಗಳಲ್ಲಿ ದೇವಸ್ಥಾನ ಆಚರಣೆ ಸಮಿತಿಯವರು, ಪ್ರಮುಖರು, ದೇವಾಂಗ ಸಮಾಜದ ಹಿರಿಯರು, ಯುವ ಧುರೀಣರು ಹಾಗೂ ಅನೇಕ ಮಹಿಳಾ ಕಾರ್ಯಕರ್ತರು ಧಾರ್ಮಿಕ ಉತ್ಸವಗಳಲ್ಲಿ ಪಾಲ್ಗೊಂಡಿದ್ದರು.
ಶ್ರೀ ದೇವಿ ಹೋಮ, ಕರಿಗಡುಬಿನ ಉತ್ಸವ: ಇದೇ 25 ನೇ ಭಾನುವಾರ ದೇವಿ ದೇವಸ್ಥಾನದಲ್ಲಿ ಮಹಾ ನವಮಿ ನಿಮಿತ್ತ ಮಹಾಪೂಜಾ, ಶ್ರೀ ದೇವಿ ಹೋಮ ಮತ್ತು ಬೆಳಿಗ್ಗೆ 10 ಗಂಟೆಗೆ ಪುರಾಣ ಮಂಗಲ ಕಾರ್ಯಕ್ರಮ ನೆರವೇರಲಿವೆ. ಮಧ್ಯಾಹ್ನ 1.30ಕ್ಕೆ ಮಹಾನವಮಿ ನಿಮಿತ್ತ ಪ್ರತಿ ವರ್ಷದಂತೆ ಈ ಬಾರಿಯೂ ಭಕ್ತಾದಿ ಗಳಿಗೆ ಕರಿಗಡುಬಿನ ಭೂರಿ ಭೋಜನ ಆಯೋಜಿಸಲಾಗಿದ್ದು ಭಕ್ತ ಸಮೂಹ ಕೋವಿಡ್ ನಿಯಮಾವಳಿ ಪಾಲಿಸುವಂತೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.