ADVERTISEMENT

ಪ್ರವಾಸಿಗರಿಗೆ ಸುರಕ್ಷತೆಯ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 3:01 IST
Last Updated 3 ಆಗಸ್ಟ್ 2021, 3:01 IST
ರಬಕವಿ ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯವನ್ನು ನೋಡಲು ಬಂದಿದ್ದ ಪ್ರವಾಸಿಗರು
ರಬಕವಿ ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯವನ್ನು ನೋಡಲು ಬಂದಿದ್ದ ಪ್ರವಾಸಿಗರು   

ರಬಕವಿ ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಜಲಾಶಯ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರತಿನಿತ್ಯ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲ್ಲೂಕಿನ ನೂರಾರು ಜನರು ವೀಕ್ಷಣೆ ಮಾಡಲು ಬರುತ್ತಿದ್ದಾರೆ.

ಆದರೆ ಜಲಾಶಯದ ಸುತ್ತಮುತ್ತ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ವೀಕ್ಷಣೆ ಮಾಡಲು ಬಂದ ಜನರು ಜಲಾಶಯದ ಎಲ್ಲ ಕಡೆಗೂ ಓಡಾಡುತ್ತಾರೆ. ಇಲ್ಲಿ ಹಾಕಲಾದ ಕಬ್ಬಿಣ ಸಲಾಕೆಯ ತಡೆಗೋಡೆಗಳು ಬಹಳಷ್ಟು ಚಿಕ್ಕದಾಗಿವೆ. ಜನರು ಇವುಗಳ ಮೇಲೆ ಕುಳಿತುಕೊಂಡು ಫೋಟೊ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಅದೇ ರೀತಿಯಾಗಿ ಚಿಕ್ಕ ಮಕ್ಕಳನ್ನು ನದಿಯ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಸಲಾಕೆಗಳು ಕೂಡಾ ಬಹಳಷ್ಟು ಹಳೆಯದಾಗಿವೆ ಮತ್ತು ತುಕ್ಕು ಹಿಡಿದಿವೆ.

ಗೇಟ್‍ಗಳನ್ನು ಹಾಕುವ ಮತ್ತು ತೆಗೆಯುವ ಯಂತ್ರದ ಸೇತುವೆಯ ಮೇಲೆಯೂ ಜನರು ಹೋಗುತ್ತಾರೆ. ಇಲ್ಲಿ ಹೋಗದಂತೆ ಯಾವುದೇ ನಿರ್ಬಂಧ ಇಲ್ಲವಾಗಿವೆ.
ಆದ್ದರಿಂದ ಯಾವುದೇ ಅಪಾಯ ಸಂಭವಿಸುವುದಕ್ಕಿಂತ ಮೊದಲು ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ನೀಡಿ ಹಿಪ್ಪರಗಿ ಜಲಾಶಯದಲ್ಲಿ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ‍್ಳಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.