ಕಮತಗಿ(ಅಮೀನಗಡ): ಒಂದೇ ದಿನ ಕೇವಲ 9 ಗಂಟೆಗಳಲ್ಲಿ 16 ಎಕರೆ ಯಡಿ ಹೊಡೆಯುವ ಮೂಲಕ ಇಲ್ಲಿನ ರೈತರೊಬ್ಬರ ಎತ್ತುಗಳು ಎಲ್ಲರೂ ಹುಬ್ಬೇರುವಂತೆ ಮಾಡಿವೆ.
ಕಮತಗಿ ಪಟ್ಟಣದ ರೈತ ಹುಚ್ಚಪ್ಪ ಬಸಪ್ಪ ಹುಗ್ಗಿ ಅವರ ಎತ್ತುಗಳು ಈ ಸಾಹಸ ಮಾಡಿವೆ. ಹುಗ್ಗಿ ಅವರು ರಾಮಥಾಳ ಗ್ರಾಮದ ಹತ್ತಿರದ 16 ಎಕರೆ ಜಮೀನಿನಲ್ಲಿ ಹೆಸರು ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ 6ಕ್ಕೆ ಜಮೀನಿನಲ್ಲಿ ಯಡಿ ಹೊಡೆಯಲು ಪ್ರಾರಂಭಿಸಿದರು. ಸಂಜೆ 3ಗಂಟೆ ಹೊತ್ತಿಗೆ 16 ಎಕರೆ ಮುಕ್ತಾಯವಾಗಿದೆ. ನಿರಂತರವಾಗಿ ಗಳೆಯನ್ನು ಹೂಡಲಾಗಿತ್ತು. ಆದರೂ ಎತ್ತುಗಳು ಸುಸ್ತಾಗಿರಲಿಲ್ಲ.
’ಕಿಲಾರಿ ಜಾತಿಗೆ ಸೇರಿದ ಈ ಎತ್ತುಗಳನ್ನು ಪ್ರೀತಿಯಿಂದ ಸಲುಹುತ್ತಿದ್ದೇವೆ. ಕೆಲಸದ ವಿಷಯದಲ್ಲಿ ಚೆನ್ನಾಗಿವೆ. ಇವೊತ್ತಿನ ಕೆಲಸ ಖುಷಿ ತಂದಿದೆ’ ಎಂದು ಹುಗ್ಗಿ ಹೇಳಿದರು. ಯಡಿ ಹೊಡೆಯುವ ಕೆಲಸದಲ್ಲಿ ಶಿವಪ್ಪ ಹುಚ್ಚಪ್ಪ ಹುಗ್ಗಿ, ಬಸವರಾಜ ಹುಚ್ಚಪ್ಪ ಹುಗ್ಗಿ, ರಮೇಶ ಜಗ್ಗಲ, ಕರಿಯಪ್ಪ ಹುಚ್ಚಪ್ಪ ಹುಗ್ಗಿ ನೆರವಾಗಿದ್ದರು. ಎತ್ತುಗಳ ಈ ಸಾಧನೆಯಿಂದ ಜನರು ಖುಷಿಪಟ್ಟರು. ಗುಲಾಲ ಹಚ್ಚಿ, ಹೂವಿನ ಹಾರ ಹಾಕಿ ಸಿಂಗರಿಸಿ ಕರಡಿ ಮಜಲುಗಳೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಶಿ.ಗು.ಹಿರೇಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.