ಲೋಕಾಪುರ: ‘ಮಹಾತ್ಮರು, ಶಿವಶರಣರು, ಯೋಗಿಗಳ ಅನುಭಾವದ ನುಡಿಗಳನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಸಮಾಧಾನ ಪ್ರಾಪ್ತವಾಗುತ್ತದೆ’ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.
ಸಮೀಪದ ಕನಸಗೇರಿ ಗ್ರಾಮದಲ್ಲಿ ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ, ‘ಮನೆ ಮನದಲ್ಲಿ ವೇಮನರ 180ನೇ ಮಾಸಿಕ ತತ್ವ ಚಿಂತನ ಕಾರ್ಯಕ್ರಮ ಉದ್ಘಾಟಿಸಿ, 'ತೊರೆಯಬೇಕು ಊರ ವಿರಾಮವಿರದಾಗ...' ಎನ್ನುವ ವಚನ ಕುರಿತು ಮಾತನಾಡಿದರು.
ಮನುಷ್ಯ ಬರೀ ಸಂಸಾರದ ಜಂಜಾಟದಲ್ಲಿ ಸಿಲುಕಿ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಂಡು ದು:ಖಿತನಾಗಿದ್ದಾನೆ. ಸಮಾಧಾನ, ಶಾಂತಿ, ನೆಮ್ಮದಿ ಇಲ್ಲದಂತಾಗಿ ಚಿಂತೆಯಲ್ಲಿದ್ದಾನೆ. ಇದಕ್ಕೆ ಕೊನೆಹಾಡಿ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಪಡೆಯಲು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು.
ಮುಧೋಳ ತಾಲ್ಲೂಕು ರಡ್ಡಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ಬೇವೂರ ಮಾತನಾಡಿ, ಮಲ್ಲಮ್ಮ ಹಾಗೂ ವೇಮನರ ತತ್ವಾದರ್ಶಗಳನ್ನು ಪಾಲಿಸಿ ನಡೆಯಬೇಕು. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ದಾದನಟ್ಟಿ ಶಿವಾನಂದ ಮಠದ ನಿಜಾನಂದ ಸ್ವಾಮೀಜಿ, ಮನುಷ್ಯತ್ವದ ಬದುಕು ನಮ್ಮದಾಗಬೇಕು. ಪ್ರಪಂಚದಲ್ಲಿದ್ದುಕೊಂಡೇ ಪಾರಮಾರ್ಥ ಸಾಧಿಸಿ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಮಲ್ಲನಗೌಡ ಪಾಟೀಲ, ಭೀಮನಗೌಡ ಪಾಟೀಲ, ನಿವೃತ್ತ ಪ್ರಾಧ್ಯಾಪಕ ವಿನಾಯಕ ಪಾಟೀಲ, ನಿಂಗನಗೌಡ ಪಾಟೀಲ, ಕೃಷ್ಣಾ ಗಲಗಲಿ, ಲೋಕನಗೌಡ ಪಾಟೀಲ, ಮಲ್ಲಪ್ಪ ಮೇಲಪ್ಪನವರ, ಮಲ್ಲನಗೌಡ ಪಾಟೀಲ ಅತಿಥಿಗಳಾಗಿದ್ದರು.
ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನ ವಚನ ಪಠಣ ಮಾಡಿದರು. ವಕೀಲ ಮಹಾದೇವ ಯರಡ್ಡಿ ಸ್ವಾಗತಿಸಿದರು. ಪಶು ವೈದ್ಯಾಧಿಕಾರಿ ಡಿ.ಎಂ.ಬೆಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಚ್.ಬಿ.ಗೋಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.