
ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣ ಹಾಗೂ ತಾಲ್ಲೂಕಿನ, ತೆಗ್ಗಿ, ತಿಮ್ಮಸಾಗರ, ಕೆಲವಡಿ, ಮಂಗಳಗುಡ್ಡ ಕಾಟಾಪುರ ಮುಂತಾದ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆ ಆಗಿದೆ.
ತಾಲ್ಲೂಕಿನ ಮಂಗಳಗುಡ್ಡ ಗ್ರಾಮದ ಜನವಸತಿಯ ಒಂದೇ ಕಡೆಗೆ ಇದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೊನಿಯ 45-50 ಶೆಡ್ನ ತಗಡುಗಳು ಶುಕ್ರವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆಗೆ ಹಾರಿ ಸುಮಾರು ನೂರು ಮೀಟರ್ ದೂರ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಯಾವುದೇ ಸಾವು ನೋವು, ಅವಘಡ ಸಂಭವಿಸಿಲ್ಲ.
ಮಳೆ, ಗಾಳಿಗೆ ಶೆಡ್ ಹತ್ತಿರದ ವಿದ್ಯುತ್ ಕಂಬವೊಂದು ಶೆಡ್ ಮೇಲೆ ಬಿದ್ದಿದೆ. ಅದೃಷ್ಠವಶಾತ್ ಹೆಸ್ಕಾಂ ಇಲಾಖೆಯವರು ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಇಲ್ಲದಿದ್ದರೆ ತಗಡಿನ ಶೆಡ್ನಲ್ಲಿದ್ದ ಇಡೀ ಕುಟುಂಬ ಸದಸ್ಯರ ಪ್ರಾಣಕ್ಕೆ ಹಾನಿಯಾಗುತ್ತಿತ್ತು. ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಮಲ್ಲಿಕಾರ್ಜುನ ಬಡಿಗೇರ ತಿಳಿಸಿದ್ದಾರೆ.
ಮಾಹಿತಿ ತಿಳಿದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಂಗಳಗುಡ್ಡ ಗ್ರಾಮಕ್ಕೆ ಹೋಗಿ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಮನೆಗಳಿಗೆ ಹಾನಿಯಾಗಿರುವುದನ್ನು ಸಮೀಕ್ಷೆ ಮಾಡಿ ಅವರ ಮನೆಗಳನ್ನು ಮೊದಲಿನಂತೆ ನಿರ್ಮಿಸಿಕೊಡಲು ಹಾಗೂ ಆಹಾರದ ಕೊರತೆ ಕಂಡು ಬಂದಲ್ಲಿ ಆ ಕುಟುಂಬಗಳಿಗೆ ಆಹಾರ ಪೂರೈಸುವಂತೆ ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಇ.ಒ ಮಲ್ಲಿಕಾರ್ಜುನ ಬಡಿಗೇರ ಹಾಗೂ ಪಿಡಿಒ ಮಲ್ಲು ವಾರದ ಅವರಿಗೂ ಸೂಚನೆ ನೀಡಿದರು.
ನಂತರ ತಹಶೀಲ್ದಾರ್ ಮಂಗಳಾ ಅವರಿಗೂ ಕರೆ ಮಾಡಿ ಕುಟುಂಬಗಳಿಗೆ ಆದ ಹಾನಿಯನ್ನು ತಕ್ಷಣ ಭರಿಸುವಂತೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.