ತೇರದಾಳ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆ ನೀರು ಮಂಗಳವಾರ ರಾತ್ರಿ ತೇರದಾಳ ಹಾಗೂ ಸಮೀಪದ ಸಸಾಲಟ್ಟಿ ಗ್ರಾಮದ ಮನೆಗಳಿಗೆ ನುಗ್ಗಿದೆ. ಪರಿಣಾಮ ಕುಟುಂಬದವರು ಪರದಾಡುವಂತಾಯಿತು.
ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಹಾಯ್ದು ಹೋಗುವ ಚರಂಡಿಯನ್ನು ಸ್ಥಳೀಯ ಪುರಸಭೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿದೆ ಎಂಬುದು ಸ್ಥಳೀಯರ ಆರೋಪ. ಮಂಗಳವಾರ ಸಂಜೆ ಸುರಿದ ಮಳೆಯ ನೀರು ಏಕಾಏಕಿ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಆಸರೆಗಾಗಿ ಪರದಾಡುವಂತಾಯಿತು.
ಬ್ರಹ್ಮಾನಂದ ಆಶ್ರಮ, ಹಿಡಕಲ್ ರಸ್ತೆ, ಗುಮ್ಮಟಗಲ್ಲಿ ಮೂಲಕ ಪ್ರವೇಶಿಸಿದ ಮಳೆ ನೀರು ಭಜಂತ್ರಿ ಗಲ್ಲಿಯ ದೇವಸ್ಥಾನ ಸೇರಿದಂತೆ ಅಂಬೇಡ್ಕರ್ ವೃತ್ತ ದಾಟಿ ರಭಸವಾಗಿ ಹರಿದು ಮನೆಗಳಿಗೆ ನುಗ್ಗಿದೆ. ಇದರಿಂದ ಪಾತ್ರೆ, ಅಡುಗೆ ಸಾಮಾನುಗಳು, ಹಾಸಿಗೆ ಸೇರಿದಂತೆ ದವಸ ಧಾನ್ಯ ನೀರು ಪಾಲಾಗಿವೆ. ಬುಧವಾರ ಬೆಳಿಗ್ಗೆ ಪುರಸಭೆ ನೀರು ಹರಿದು ಹೋಗುವಂತೆ ಕ್ರಮ ಕೈಗೊಂಡಿತು.
ಸಮೀಪದ ಸಸಾಲಟ್ಟಿಯಲ್ಲಿ ಮಳೆಯ ನೀರಿನಿಂದ ಹಳ್ಳ ತುಂಬಿ ಪರಿಶಿಷ್ಟರ ಕೇರಿಯ 29 ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿನ ಕಿರಿದಾದ ಸೇತುವೆ ಮೂಲಕ ನೀರು ಹರಿದು ಹೋಗುವಂತೆ ಸ್ಥಳೀಯ ಮುಖಂಡರು ರಾತ್ರಿ ಜೆಸಿಬಿ ಯಂತ್ರದ ಸಹಾಯದಿಂದ ವ್ಯವಸ್ಥೆ ಮಾಡಿದ್ದು, ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ರಾತ್ರಿಯಿಡೀ ತೊಂದರೆ ಅನುಭವಿಸಿದ್ದಾರೆ. ಪಾತ್ರೆ, ಧಾನ್ಯ ಹಾಗೂ ಹಾಸಿಗೆ ನೀರು ಪಾಲಾಗಿವೆ. ಮಂಗಳವಾರ ರಾತ್ರಿಯೇ ಸ್ಥಳಕ್ಕಾಗಮಿಸಿದ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಖವಟಕೊಪ್ಪ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಸ್ಥಳೀಯರಾದ ದೇವರಾಜ ಬಳಗಾರ, ಪ್ರಕಾಶ ಬೆಂಡಿಕಾಯಿ, ಕಮಾಲ ಪಠಾಣ, ಸಿದ್ದಯ್ಯ ಮಠಪತಿ, ಶೆಟ್ಟೆಪ್ಪ ಸರಿಕರ, ಶಿವಲಿಂಗ ಪರ್ವತನವರ, ಚಂದ್ರು ಸರಿಕರ, ನಾಗಪ್ಪ ಪರ್ವತನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.