ಗುಳೇದಗುಡ್ಡ: ತಾಲ್ಲೂಕಿನಲ್ಲಿ 38 ಹಳ್ಳಿಗಳಿದ್ದು, 60ಕ್ಕೂ ಹೆಚ್ಚು ಕೆರೆಗಳು ಇವೆ. ಈಚೆಗೆ ಸುರಿದ ಮಳೆಯಿಂದಾಗಿ ಎಲ್ಲ ಕೆರೆ–ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಹೀಗಾಗಿ ತಾಲ್ಲೂಕಿನಲ್ಲಿ ಈ ವರ್ಷ ನೀರಿನ ಸಮಸ್ಯೆ ಕಡಿಮೆಯಾಗಲಿದೆ.
ತಾಲ್ಲೂಕಿನ ಕೆರೆ ಖಾನಾಪುರ ಬಳಿ ಇರುವ ಹಿರೇಕೆರೆ ಈ ವರ್ಷ ಪೂರ್ಣ ಭರ್ತಿಯಾಗಿದೆ. ಈ ಭಾಗದಲ್ಲಿ ಅತ್ಯಂತ ದೊಡ್ಡದಾದ ಕೆರೆ ಇದಾಗಿದ್ದು 98 ಎಕರೆ ವಿಸ್ತಾರ ಹೊಂದಿದೆ. ಪರ್ವತಿ ಈರಣ್ಣನ ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, 400ಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರಾವರಿ ಲಭಿಸಿದೆ. ವರ್ಷಕ್ಕೆ ಎರಡು ಬೆಳೆ ಬೆಳೆಯಲಾಗುತ್ತದೆ.
ಕೆರೆ ಖಾನಾಪುರ ಹೋಗುವಾಗ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಗಂಜಿಗೆರೆ ಇದ್ದು ಈ ವರ್ಷ ಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. 70 ಎಕರೆ ವಿಸ್ತಾರ ಹೊಂದಿದ್ದು ಈ ನೀರಿನಿಂದ 200ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ನೀರಾವರಿ ಮಾಡಲಾಗುತ್ತಿದೆ. ನೀರು ನಿರ್ವಹಣೆಗಾಗಿ ಮಾರುತೇಶ್ವರ ನೀರು ಬಳಕೆದಾರರ ಸಂಘ ಅಸ್ತಿತ್ವದಲ್ಲಿದೆ.
ದನಕರುಗಳಿಗಿಲ್ಲ ನೀರಿನ ಸಮಸ್ಯೆ: ಈ ವರ್ಷ ಉತ್ತಮ ಮಳೆ ಆಗಿರುವುದರಿಂದ ದನಕರು, ಕುರಿಗಾರರ ಕುರಿಗಳಿಗೆ ಈ ವರ್ಷ ನೀರಿನ ಸಮಸ್ಯೆ ಇಲ್ಲವಾಗಿದೆ. ಬೇಸಿಗೆಯ ನಂತರ ಬರುವ ಮಳೆಗಾಲದವರೆಗೂ ನೀರಿನ ಕೊರತೆ ಆಗುವುದಿಲ್ಲ.
ಹೆಚ್ಚಿದ ಅಂತರ್ಜಲ ಮಟ್ಟ: ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಲಾಯದಗುಂದಿ ಹಾಗೂ ಇತರ ಗ್ರಾಮಗಳಲ್ಲಿ ಬತ್ತಿದ ಬೋರವೆಲ್ಗಳಲ್ಲಿಯೂ ನೀರು ಬಂದಿದೆ.
ಮೈದುಂಬಿದ ಜಲಪಾತಗಳು: ತಾಲ್ಲೂಕಿನ ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ಹಿರೇಹಳ್ಳದ ದಿಡುಗು ಜಲಪಾತ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ತಾಲ್ಲೂಕಿನ ಹಾನಾಪುರ ಎಸ್.ಪಿ ಗ್ರಾಮದಲ್ಲಿ ಪೂರ್ವಕ್ಕೆ 1 ಕಿ.ಮೀ ಅಂತರದಲ್ಲಿ ಇರುವ ಹಾಲಹಂಡೆ ಜಲಪಾತವೂ ಧುಮ್ಮಿಕ್ಕುತ್ತಿದೆ.
‘ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಕೆರೆಯಲ್ಲಿ ನೀರು ಭರ್ತಿಯಾದ್ದು ಉತ್ತಮ ಬೆಳೆ ತೆಗೆಯಬಹುದು’ ಎಂದು ಪರ್ವತಿ ಗ್ರಾಮದ ಕೃಷಿಕ ಮಹಾಂತೇಶ ಸರಗಣಾಚಾರಿ ಹೇಳಿದರು.
‘ಪರ್ವತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಿರೇಕೆರೆ, ಗಂಜಿಗೆರೆಯಲ್ಲಿ ಕಳೆದ ಏಪ್ರಿಲ್-ಮೇನಲ್ಲಿ ನರೇಗಾ ಯೋಜನೆಯಲ್ಲಿ ಹೂಳೆತ್ತಲಾಗಿತ್ತು. ಈ ವರ್ಷ ಉತ್ತಮ ಮಳೆಯಾದ್ದರಿಂದ ಕೆರೆ ಭರ್ತಿಯಾಗಿವೆ’ ಎಂದು ಪರ್ವತಿ ಗ್ರಾಮ ಪಂಚಾಯಿತಿ ಪಿಡಿಒ ಎಸ್.ಎನ್.ರಾಜನಾಳ ತಿಳಿಸಿದರು.
ನೂರಾರು ಕೆರೆಗಳ ಹೂಳು ತೆರವು
ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೂರಾರು ಕೆರೆಗಳನ್ನು ನರೇಗಾ ಯೋಜನೆಯಲ್ಲಿ ಸಂಪೂರ್ಣ ಹೂಳೆತ್ತಲಾಗಿದೆ. ಈ ವರ್ಷ ದನಕರು ಕುರಿ ಮೇಕೆಗಳಿಗೆ ನೀರಿನ ಸಮಸ್ಯೆ ಇಲ್ಲ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.