
ರಬಕವಿ ಬನಹಟ್ಟಿ: ‘ಸಂತರು, ಮಹಾತ್ಮರು ಲೋಕೋದ್ಧಾರಕ್ಕಾಗಿ ಜನ್ಮ ತಾಳಿದವರು. ಅಂಥವರ ಪಾದ ಸ್ಪರ್ಶದಿಂದ ಆ ಪ್ರದೇಶ ಪಾವನವಾಗುತ್ತದೆ. ಮಹಾನ್ ತಪಸ್ವಿಗಳಲ್ಲಿ ಯಾವುದೇ ಭೇದಭಾವ ಇರುವುದಿಲ್ಲ. ಅಂಥ ಮಹಾನ್ ತಪಸ್ವಿಗಳಲ್ಲಿ ಗರಗದ ಮಡಿವಾಳೇಶ್ವರರು ಒಬ್ಬರು’ ಎಂದು ಹಿಪ್ಪರಗಿಯ ಆರೂಢ ಬಸವಾಶ್ರಮದ ಸಿದ್ಧಾರೂಢ ಶರಣರು ನುಡಿದರು.
ಗುರುವಾರ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 160 ನೇ ಮತ್ತು ಗುರುಸಿದ್ಧೇಶ್ವರ ಸ್ವಾಮೀಜಿಯವರ 82ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಜೀವನಕ್ಕೆ ಜ್ಞಾನದ ಬೆಳಕು ಅಗತ್ಯ. ಇಂದಿನ ಒತ್ತಡದ ಜೀವನದಲ್ಲಿ ಪ್ರವಚನ ಅಗತ್ಯವಾಗಿದೆ. ಪ್ರವಚನದಿಂದ ನಾವು ಪ್ರಜ್ಞೆ, ಜ್ಞಾನ ಮತ್ತು ತಿಳಿವಳಿಕೆ ಪಡೆಯಬಹುದು. ಜೀವನದ ಮೌಲ್ಯಗಳನ್ನು ತಿಳಿದುಕೊಳ್ಳಬಹುದು’ ಎಂದು ಹೇಳಿದರು.
‘ಶಿವನ ಅನುಗ್ರಹದಿಂದ ಜನ್ಮ ತಾಳಿದವರು ಶರಣರು. ಅಂಥ ಮಹಾನ್ ವ್ಯಕ್ತಿಗಳಲ್ಲಿ ಗರಗದ ಮಡಿವಾಳೇಶ್ವರರು ಒಬ್ಬರು. ಮಡಿವಾಳೇಶ್ವರರು ಸಿದ್ಧಾರೂಢರ ಗರಡಿಯಲ್ಲಿ ಅನುಭಾವ ಹೊಂದಿದವರು. ಅಂಥವರ ಪ್ರವಚನ ಕೇಳುವುದರಿಂದ ನಮ್ಮ ಜೀವನವೂ ಕೂಡಾ ಪಾವನವಾಗುತ್ತದೆ’ ಎಂದು ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
ಬೆಳಗ್ಗೆ ಆಶ್ರಮದ ಭಕ್ತರ ಸಮ್ಮುಖದಲ್ಲಿ ಪ್ರಣವ ಧ್ವಜಾರೋಹಣ ಕಾರ್ಯಕ್ರಮವನ್ನು ಗುರುಸಿದ್ಧೇಶ್ವರ ಸ್ವಾಮೀಜಿ ನೆರವೇರಿಸಿದರು.
ಬುದ್ದಪ್ಪ ಕುಂದಗೋಳ, ಗಿರೀಶ ಮುತ್ತೂರ, ರಾಮಣ್ಣ ಕುಲಗೋಡ, ಮಹಾದೇವ ಕವಿಶೆಟ್ಟಿ, ಶಿವಾನಂದ ದಾಶ್ಯಾಳ, ಡಾ.ರವಿ ಜಮಖಂಡಿ, ಶಿವಾಜಾತ ಉಮದಿ, ಮಾರುತಿ ಗಂಥಡೆ, ಸುರೇಶ ಮುಳವಾಡ, ವೀರೂಪಾಕ್ಷಯ್ಯ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.