
ಸಸಾಲಟ್ಟಿ (ತೇರದಾಳ): ಬಾಗಲಕೋಟ ಜಿಲ್ಲೆಯ ಕೊನೆಯ ಗ್ರಾಮವಾದ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಶಿವಲಿಂಗೇಶ್ವರರ 68ನೇ ಪುಣ್ಯಾರಾಧನೆ ಅಂಗವಾಗಿ ಗುರುವಾರ ನಂದಿಕೋಲು ಹಾಗೂ ಭವ್ಯ ರಥೋತ್ಸವ ಜರುಗಿತು.
ಜಾತ್ರೆ ಅಂಗವಾಗಿ ಫೆ.18 ರಿಂದ 23ರವರೆಗೆ ಶಿವಪ್ರಸಾದ ದೇವರು, ಅಭಿನವ ಕಲ್ಮೇಶ್ವರ ಶ್ರೀ ಸೇರಿದಂತೆ ಹಲವು ಶರಣರಿಂದ ಪುರಾಣ, ಪ್ರವಚನ ಕಾರ್ಯಕ್ರಮಗಳು ಜರುಗಿದವು. 24ರ ಸಂಜೆ ಹಲವು ಭಜನಾ ತಂಡಗಳು ಭಜನಾ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಡಿಯಿಂದ ದೀರ್ಘದಂಡ ನಮಸ್ಕಾರ ಸೇವೆ ಮೂಲಕ ಹರಕೆ ಸಲ್ಲಿಸಿದರು.
ಗುರುವಾರ ಪ್ರಾತಃಕಾಲ ಶಿವಲಿಂಗೇಶ್ವರರ ಕೃರ್ತ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಅಲಂಕಾರ, ಪೂಜೆಯನ್ನು ದೇವಸ್ಥಾನದ ಅರ್ಚಕರಾದ ಅಡವೇಶ ಮಠದ ಹಾಗೂ ಮಹೇಶ ಹಿರೇಮಠ ನೆರವೇರಿಸಿದರು. ಬಳಿಕ ಗಣಾರಾಧನೆ ಜರುಗಿತು. ವಾಡಿಕೆಯಂತೆ ಭಕ್ತರು ತಮ್ಮ ಎತ್ತಿನ ಬಂಡಿ, ಟ್ರ್ಯಾಕ್ಟರ್ಗಳಲ್ಲಿ ನೀರು ತಂದು ಹಾಕುವ ಕಾರ್ಯಕ್ರಮ ಜರುಗಿತು. ಅನ್ನಪ್ರಸಾದ ವಿತರಣೆಗೆ ಚಾಲನೆ ನೀಡಲಾಯಿತು.
ಸಂಜೆ ಅಲಂಕೃತ ನಂದಿಕೋಲು ಹಾಗೂ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಪೂಜ್ಯರು ನೀಡಿದರು. ಭವ್ಯ ರಥೋತ್ಸವವು ಶಿವಲಿಂಗೇಶ್ವರ ದೇವಸ್ಥಾನದಿಂದ ಹೊರಟು ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕೆಲ ಕಾಲ ನಿಂತಿತು. ಸಾಗುವ ರಥಕ್ಕೆ ಭಕ್ತರು ಬೆಂಡು, ಬತ್ತಾಸು, ಉತ್ತತ್ತಿ, ಬಿಸ್ಕತ್ತು ಎಸೆದು ಭಕ್ತಿ ಸಮರ್ಪಿಸಿದರು.
ಸ್ಥಳೀಯ, ಗೋಲಬಾವಿ, ಅಕ್ಕಿಮರಡಿ, ನಾವಲಗಿಯ ಕರಡಿ ಮಜಲು, ಡೊಳ್ಳಿನ ಕೈಪೆಟ್ಟು ಕಲಾ ತಂಡಗಳು ತಮ್ಮ ವಾದನಗಳ ಮೂಲಕ ರಥೋತ್ಸವಕ್ಕೆ ಮೆರುಗು ತಂದವು. ಸೂರ್ಯಾಸ್ತದ ಹೊತ್ತಿಗೆ ರಥವೂ ಮರಳಿ ದೇವಸ್ಥಾನಕ್ಕೆ ಆಗಮಿಸಿತು.
ಜನಪ್ರತಿನಿಧಿಗಳು, ಗ್ರಾಮದ ಮುಖಂಡರು, ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವ ಹಾಗೂ ಜಾತ್ರಾ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲ ಕಾರ್ಯಕ್ರಮಗಳು ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ, ಕಮಡೊಳ್ಳಿಯ ಲೋಚನೇಶ್ವರ ವಿರಕ್ತಮಠದ ಅಭಿನವ ರಾಚೋಟೇಶ್ವರ ದೇವರು, ತೇರದಾಳದ ಗಂಗಾಧರ ದೇವರ, ಶ್ರೀಮಠದ ಬಸವಲಿಂಗಯ್ಯ ಆರ್ಯರ ನೇತ್ರತ್ವದಲ್ಲಿ ಜರುಗಿದವು.
ಇಂದು ಕುಸ್ತಿ: ಜಾತ್ರೆ ಅಂಗವಾಗಿ ರಾಜ್ಯ ಹಾಗೂ ಹೊರರಾಜ್ಯಗಳ ಪೈಲ್ವಾನರ ಜಂಗಿ ನಿಕಾಲಿ ಕುಸ್ತಿ ಪಂದ್ಯಗಳು ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಜರುಗಲಿವೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.