ADVERTISEMENT

ಮುಧೋಳ | ಅಧಿಕಾರಾವಧಿಯಲ್ಲಿ ಏನು ಮಾಡಿದ್ದೇವೆಂಬುದು ಮುಖ್ಯ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 4:06 IST
Last Updated 18 ಅಕ್ಟೋಬರ್ 2025, 4:06 IST
ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ವೀರ ಜಡಗಣ್ಣ ಮತ್ತು ಬಾಲಣ್ಣ ಅವರ ಕಂಚಿನ ಮೂರ್ತಿ ಅನಾವರಣ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮುಧೋಳದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು
ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ವೀರ ಜಡಗಣ್ಣ ಮತ್ತು ಬಾಲಣ್ಣ ಅವರ ಕಂಚಿನ ಮೂರ್ತಿ ಅನಾವರಣ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮುಧೋಳದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು   

ಮುಧೋಳ: ‘ಬ್ರಿಟಿಷರ ವಿರುದ್ಧ ತಮ್ಮ ಸ್ವಾಭಿಮಾನಕ್ಕಾಗಿ ಹೋರಾಡಿ ಹುತಾತ್ಮರಾದ ಕರ್ನಾಟಕದ ವೀರ ಜಡಗಣ್ಣ ಮತ್ತು ಬಾಲಣ್ಣ ಅವರ ಚರಿತ್ರೆ ದೇಶದ ಜನಕ್ಕೆ ಮುಟ್ಟಬೇಕಿತ್ತು. ಇತಿಹಾಸವನ್ನು ಮುಚ್ಚಿ ಹಾಕುವ ಕೆಲಸವು ಮೊದಲಿನಿಂದಲೂ ಇದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ವೀರ ಜಡಗಣ್ಣ ಮತ್ತು ಬಾಲಣ್ಣ ಅವರ ಕಂಚಿನ ಮೂರ್ತಿ ಅನಾವರಣ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ‘ನಾವು ಎಷ್ಟು ದಿನ ಅಧಿಕಾರದಲ್ಲಿದ್ದೇವೆ ಎಂಬುದು ಮುಖ್ಯವಲ್ಲ ಸಮಾಜದ ಒಳತಿಗಾಗಿ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯ’ ಎಂದು ಹೇಳಿದರು.

ಮಾಜಿ ಸಚಿವ ರಾಜುಗೌಡ ನಾಯಕ ಮಾತನಾಡಿ, ‘ಹಲಗಲಿ ಬೇಡರು ಶೂರರು. ಶಸ್ತ್ರವನ್ನು ತ್ಯಜಿಸದೇ ಬಲಿದಾನವಾದರು. ಅವರು ನಮ್ಮ ಸಮಾಜದ ಕಿರೀಟಪ್ರಾಯರು. ಸಮ್ಮ ಸಮಾಜವನ್ನು ಎಲ್ಲರೂ ಉಪಯೋಗಿಸುತ್ತಿದ್ದಾರೆ. ಸತೀಶ ಜಾರಕಿಹೊಳಿ ಅವರು ಮಾತನಾಡದೇ ಕಾರ್ಯಸಾಧಿಸುವುವವರು. ಅವರು ಹಾಕಿದ ಪ್ಲಾನ್ ಎಂದೂ ಹುಸಿ ಹೊಗಿಲ್ಲ ಅವರು ಶಸ್ತ್ರವನ್ನು ಕೆಳಗಿಡದೇ ಇದೇ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಬೇಕು ಎಂಬುದು ರಾಜ್ಯದ ಜನತೆಯ ಆಶಯವಾಗಿದೆ. 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ರಾಮಾಯಣ ರಚಿಸಿದರು. ರಾಮಾಯಣದಲ್ಲಿ ಬದುಕಿನ ಆದರ್ಶ ಅಡಗಿದೆ. ಶೂರ ಜಡಗಣ್ಣ ಬಾಲಣ್ಣ ನಮ್ಮ ಮುಧೋಳ ತಾಲ್ಲೂಕಿನವರು ಎಂಬ ಹೆಮ್ಮೆ ಇದೆ. ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು’ ಎಂದು ಹೇಳಿದರು.

ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ದೇಶದಲ್ಲಿ ಸ್ವಾತಂತ್ರ್ಯದ ಕಿಡಿ ಹತ್ತಿದ್ದೇ ಹಲಗಲಿ ಬೇಡರಿಂದ. 1857ರಲ್ಲಿ ಬ್ರಿಟಿಷರಿಗೆ ಸೆಡ್ಡು ಹೊಡೆದು ನಿಂತವರು ಜಡಗಣ್ಣ ಬಾಲಣ್ಣ. ಅವರ ಹೆಸರು ಶಾಶ್ವತವಾಗಿಸಲು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾವಾರು ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಜಡಗಣ್ಣ ಬಾಲಣ್ಣ ಹೆಸರಿನಲ್ಲಿ ₹ 1 ಲಕ್ಷ ಬಹುಮಾನ ನೀಡಲಾಗಿತ್ತು. ಜಡಗಣ್ಣ ಬಾಲಣ್ಣ ಅವರ ಕುರಿತು ಪಠ್ಯ ಮಾಡಬೇಕು’ ಎಂದು ಸಚಿವ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿದರು. 

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀ, ಬಂಡಿಗಣಿ ನೀಲಮಾಣಿಕ ಮಠದ ದಾನೇಶ್ವರ ಬಸವಗೋಪಾಲ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ​ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಕೆಎಂಎಫ್ ನಿರ್ದೇಶಕ ಲಕ್ಷ್ಮಣ ಮಾಲಗಿ, ವಾಲ್ಮೀಕಿ‌ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ದ್ಯಾಮಣ್ಣ ಗಾಳಿ, ತಾಲ್ಲೂಕು ಅಧ್ಯಕ್ಷ ಭೀಮಶಿ ತಳವಾರ, ​ಗೋವಿಂದಪ್ಪ ಕೌಲಗಿ, ಮಾರುತಿ ಕರೆನ್ನವರ, ಚನ್ನಬಸು ಮತ್ತೂರ, ಸುಭಾಷ ಗಸ್ತಿ, ಸತೀಶ ಕೋವಳಿ, ಹೊಳಬಸು ಬಿದರಿ, ಸಿಂಧೂರ ಆನೆಗುದ್ದಿ, ಯಲ್ಲಪ್ಪ ಕೊಳ್ಳನ್ನವರ, ಬೈಲಪ್ಪ ಸಿರುಗುಪ್ಪಿ, ರಂಗನಾಥ ಆಡಿನ, ಗಂಗಪ್ಪ ತಳವಾರ ವಿಠ್ಠಲ ಕೊಳ್ಳನ್ನವರ, ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಅಶೋಕ ಕಿವಡಿ, ಬಿಜೆಪಿ ಅಧ್ಯಕ್ಷರಾದ ಸಂಗನಗೌಡ ಕಾತರಕಿ, ಕರಬಸಯ್ಯ ಹಿರೇಮಠ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಇದ್ದರು.

ಜಡಗಾ ಬಾಲಾ ವೃತ್ತದಿಂದ ಡಾ.ಅಂಬೇಡ್ಕರ್‌ ಭವನದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು

ಮುಧೋಳದ ಬಸ್ ನಿಲ್ದಾಣದ ಹತ್ತಿರ ಹುತಾತ್ಮ ಜಡಗಣ್ಣ ಬಾಲಣ್ಣ ಮೂರ್ತಿಗಳನ್ನು ಗಣ್ಯರು ಉದ್ಘಾಟಿಸಿದರು
ಹಲಗಲಿ ಹುತಾತ್ಮ ಜಡಗಣ್ಣ ಬಾಲಣ್ಣರ ಕುರಿತು ರಾಜ್ಯದ ಜನತೆ ಅರಿತುಕೊಳ್ಳಲು ಹಲಗಲಿ ಹೆಸರಿನ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇಷ್ಟರಲ್ಲೇ ತೆರೆ ಕಾಣಲಿದೆ
ರಾಜುಗೌಡ ನಾಯಕ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.