
ಸುಶೀಲ್ ಕುಮಾರ್ ಶಿಂದೆ
ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸಬಾರದು. ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಕೇಂದ್ರದ ಮಾಜಿ ಸಚಿವ ಸುಶೀಲ್ಕುಮಾರ ಶಿಂದೆ ಹೇಳಿದರು.
ಕೂಡಲಸಂಗಮದಲ್ಲಿ ಮಂಗಳವಾರ ನಡೆದ 39ನೇ ಶರಣ ಮೇಳದಲ್ಲಿ ಮಾತನಾಡಿದ ಅವರು, ‘ಜಾತಿ, ಮತ, ಪಂಥಗಳನ್ನು ಅಳಿಸಿ ಹಾಕಲು ಬಸವಣ್ಣನವರ ತತ್ವಗಳ ಪ್ರತಿಪಾದನೆಗೆ ಹೆಚ್ಚಿನ ಒತ್ತು ಸಿಗಬೇಕಿದೆ’ ಎಂದರು.
‘ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎನ್ನುವವರೊಂದಿಗೆ ನಾನಿದ್ದೇನೆ. ನಾನು ಕಕ್ಕಯ್ಯನ ಸಮಾಜಕ್ಕೆ ಸೇರಿದವನು. ಲಿಂಗಾಯತ ಧರ್ಮ ಬಿಟ್ಟು ಎಲ್ಲಿ ಹೋಗಲಿ?’ ಎಂದು ಪ್ರಶ್ನಿಸಿದರು.
ಸೋಮವಾರ ರಾತ್ರಿ ನಡೆದ ಮಠಾಧಿಪತಿಗಳ ಧರ್ಮ ಚಿಂತನಗೋಷ್ಠಿಯಲ್ಲಿ ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಕರುಣೆಯ ಧರ್ಮವೇ ಬಸವ ಧರ್ಮ. ಇದು ಜಗತ್ತನ್ನು ಆಳುವ ಏಕೈಕ ಧರ್ಮವಾಗಲಿದೆ’ ಎಂದರು.
‘ಚಾಮರಾಜನಗರ ಜಿಲ್ಲೆ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ‘ಮಠಗಳು ಹಿಂದೆ ಮಾಡಿದ ಸೇವೆಯಿಂದಲೇ ಇಂದು ಜೀವಂತವಾಗಿವೆ. ಸಮಾಜಮುಖಿ ಕಾರ್ಯದಲ್ಲಿ ಎಲ್ಲ ಮಠಗಳು ತೊಡಗಬೇಕು’ ಎಂದರು. ಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.