ಕೂಡಲಸಂಗಮ : ಸೋಮವಾರದಿಂದ ಆರಂಭವಾಗುವ ಶ್ರಾವಣ ಮಾಸದ ಸ್ನಾನಕ್ಕೆ ಈ ವರ್ಷವೂ ಸುಕ್ಷೇತ್ರ ಕೂಡಲಸಂಗಮದಲ್ಲಿ ಅವಕಾಶ ಇಲ್ಲದೆ ಭಕ್ತರಿಗೆ ನಿರಾಸೆ ಉಂಟಾಗಿದೆ.
ಕಳೆದ ವರ್ಷ ಪ್ರವಾಹದ ಸಂಗಮೇಶ್ವರ ದೇವಾಲಯ ಸಂಪೂರ್ಣ ಜಲಾವೃತಗೊಂಡು ಪುಣ್ಯಸ್ನಾನ, ದರ್ಶನಕ್ಕೆ ಅವಕಾಶ ದೊರೆತಿರಲಿಲ್ಲ. ಈ ವರ್ಷ ಕೊರೊನಾ ಭೀತಿಯಿಂದ ನಿಗದಿತ ಅವಧಿಯ ದರ್ಶನಕ್ಕೆ ಮಾತ್ರ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅವಕಾಶ ಕಲ್ಪಿಸಿದೆ. ಪೂಜೆ, ಅಭಿಷೇಕ, ಧಾರ್ಮಿಕ ಕ್ರಿಯೆ, ಪುಣ್ಯ ಸ್ನಾನಕ್ಕೆ ಅವಕಾಶ ಕೊಟ್ಟಿಲ್ಲ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕ್ಷೇತ್ರಕ್ಕೆ 2ರಿಂದ 3 ಲಕ್ಷ ಭಕ್ತರು ಬಂದು ಪುಣ್ಯಸ್ನಾನ ಮಾಡಿ ವಿವಿಧ ಧಾರ್ಮಿಕ ಕಾರ್ಯಮಾಡುತ್ತಿದ್ದರು. ನಿತ್ಯ ಸಂಜೆ 7ರಿಂದ 9 ಗಂಟೆಯವರೆಗೆ ಶರಣರ ಕುರಿತು ಪ್ರವಚನ ನಡೆಯುತ್ತಿತ್ತು. ಈ ವರ್ಷ ಯಾವುದೇ ಪ್ರವಚನ ಕಾರ್ಯಕ್ರಮವಿಲ್ಲ.
ಶ್ರಾವಣದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಬಹುತೇಕ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರು. ಇದರಿಂದ 100ಕ್ಕೂ ಅಧಿಕ ವ್ಯಾಪಾರಿಗಳು ಬದುಕು ನಡೆಯುತ್ತಿತ್ತು. ಈ ವರ್ಷ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಕರಸಂಗಯ್ಯ ಗುಡಿ ಹೇಳುವರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಶ್ರಾವಣ ಮಾಸದಲ್ಲಿ ಮನೆ ಮನದಲ್ಲಿ ಕೂಡಲಸಂಗಮ ಹಾಗೂ ಬಸವ ಪಂಚಮಿ, ಇಷ್ಟಲಿಂಗ ದೀಕ್ಷಾಅಭಿಯಾನ ಹಾಗೂ ನಾಗರ ಪಂಚಮಿ ನಿಮಿತ್ತ ಅಂಗವಾಗಿ ಹಾಲು ಕುಡಿಯುವ ಹಬ್ಬದ ಸಪ್ತಾಹ ಕಾರ್ಯಕ್ರಮ ರದ್ದು ಮಾಡಲು ತೀರ್ಮಾನಿಸಿದ್ದು, ಭಕ್ತರ ಅಭಿಪ್ರಾಯ ಪಡೆದು ಸೋಮವಾರ ತಿರ್ಮಾನ ಕೈಗೊಳ್ಳಲಾಗುವುದು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.