ADVERTISEMENT

ಜೋಳದ ರೊಟ್ಟಿ, ಶೇಂಗಾ ಚೆಟ್ನಿ ಅಭ್ಯಾಸವಾಗಿದೆ: ಸಿದ್ದರಾಮಯ್ಯ

ಹಳೇ ಮೈಸೂರಿನವನು ಅನ್ನಲು ಹೋಗಬೇಡಿ. ನಾನೀಗ ಉತ್ತರ ಕರ್ನಾಟಕದವನು; ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:59 IST
Last Updated 3 ಫೆಬ್ರುವರಿ 2020, 12:59 IST
   

ಬಾಗಲಕೋಟೆ:‘ನನಗೆ ಹಳೇ ಮೈಸೂರಿನವನು ಅನ್ನಲು ಹೋಗಬೇಡಿ, ನಾನೀಗ ಉತ್ತರ ಕರ್ನಾಟಕದವನು. ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನೋದು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಸೋಮವಾರ ಬಾದಾಮಿ–ಕೆರೂರು ಪಟ್ಟಣಗಳು ಹಾಗೂ ಮಾರ್ಗಮಧ್ಯದ 18 ಹಳ್ಳಿಗಳಿಗೆ ₹227.80 ಕೋಟಿ ವೆಚ್ಚದಲ್ಲಿ ಆಲಮಟ್ಟಿ ಜಲಾಶಯದಿಂದ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

’ಚಾಮುಂಡೇಶ್ವರಿಯಲ್ಲಿ ಅಷ್ಟೊಂದು ಕೆಲಸ ಮಾಡಿದೆ. ಆದರೂಅವರು ಕೈಬಿಟ್ಟರು. ಸಂಕಷ್ಟದ ಸಂದರ್ಭದಲ್ಲಿ ಬಾದಾಮಿ ಜನ ಕೈ ಹಿಡಿದರು. ಹೀಗಾಗಿ ಅವರ ಋಣ ತೀರಿಸುವೆ. ಇನ್ನೂ ಮೂರು ವರ್ಷ ಅವಧಿ ಇದ್ದು, ಏನೆಲ್ಲಾ ಸಾಧ್ಯವೋ ಅಷ್ಟು ಅಭಿವೃದ್ಧಿ ಕೆಲಸ ಮಾಡುವೆ’ ಎಂದು ಭರವಸೆ ನೀಡಿದರು.ಆಗ ನೆರೆದವರಿಂದ ಚಪ್ಪಾಳೆ–ಶಿಳ್ಳೆಯ ಸುರಿಮಳೆಯೊಂದಿಗೆ ‘ಹೌದ್ದ ಹುಲಿಯಾ’ ಘೋಷಣೆ ಸದ್ದು ಜೋರಾಗಿ ಕೇಳಿಬಂದಿತು.

ADVERTISEMENT

ದೇಶಾದ್ಯಂತ ಜಾರಿಗೊಳಿಸಿ

ಬಡವರ ಬಗ್ಗೆ ಕಾಳಜಿ ಇದ್ದರೆ ಕರ್ನಾಟಕದಲ್ಲಿರುವಂತೆ ಇಡೀ ದೇಶದಲ್ಲಿ ಅನ್ನಭಾಗ್ಯ ಯೋಜನೆಯನ್ನು‍ಜಾರಿಗೊಳಿಸಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸವಾಲು ಹಾಕಿದ ಸಿದ್ದರಾಮಯ್ಯ, ಏಕೆ ಗುಜರಾತ್‌ನಲ್ಲಿ ಇರುವವರಿಗೆ ಹೊಟ್ಟೆ ಇಲ್ಲವೇ? ಯಾಕೆ ಅಲ್ಲಿ ಮಾಡೊಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಾನು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದರೆ ಅನ್ನಭಾಗ್ಯದಡಿ ನೀಡುವ ಅಕ್ಕಿಯ ಪ್ರಮಾಣವನ್ನು ಈಗಿರುವ ಏಳು ಕೆ.ಜಿಯಿಂದ 10 ಕೆ.ಜಿಗೆ ಏರಿಕೆ ಮಾಡುತ್ತಿದ್ದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.