ADVERTISEMENT

ನಮ್ಮ ಹೆಣದ ಮೇಲೆ ಕೃಷ್ಣಾ ನೀರು ಒಯ್ಯಲಿ: ಎಸ್‌.ಆರ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 21:17 IST
Last Updated 24 ಏಪ್ರಿಲ್ 2024, 21:17 IST

ಬಾಗಲಕೋಟೆ: ‘ಕೃಷ್ಣಾ ನದಿ ನೀರನ್ನು ದಕ್ಷಿಣ ಕರ್ನಾಟಕಕ್ಕೆ ನಮ್ಮ ಹೆಣದ ಮೇಲೆ ಒಯ್ಯಬೇಕು. ನಮ್ಮ ಹಕ್ಕು ಕಸಿದುಕೊಳ್ಳಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಎಚ್ಚರಿಕೆ ನೀಡಿದರು.

‘ಪ್ರಧಾನಿ ಮೋದಿ ಅವರಿದ್ದ ವೇದಿಕೆಯಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರು 28 ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳಿಗೆ ಕೃಷ್ಣಾದಿಂದ ನೀರು ತರೋಣ ಎಂದಿದ್ದಾರೆ. ಮೋದಿ ಮೇಲೆ ಪ್ರಭಾವ ಬೀರುವ ಶಕ್ತಿ ಇರುವವರು ಮಾತನಾಡಿದ್ದರಿಂದ ಉತ್ತರ ಕರ್ನಾಟಕದ ಜನ ಎಚ್ಚೆತ್ತುಕೊಳ್ಳಬೇಕು. ನೀರು ಒಯ್ಯುವ ಹುನ್ನಾರ, ಸಂಚು ನಡೆದಿದೆ’ ಎಂದು ಅವರು ತಿಳಿಸಿದರು.

‘ಸುಪ್ರೀಂಕೋರ್ಟ್ ಆದೇಶಕ್ಕೆ ಒಳಪಟ್ಟು ಕೂಡಲೇ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಬೇಕು. 14 ವರ್ಷಗಳಿಂದ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿದೆ. ಕೇಂದ್ರ ಮನಸ್ಸು ಮಾಡಿದರೆ ವ್ಯಾಜ್ಯ ಇತ್ಯರ್ಥಪಡಿಸಬಹುದು. ಉತ್ತರ ಕರ್ನಾಟಕದಲ್ಲಿ ಇವತ್ತಿಗೂ ಗುಳೆ ಹೋಗುವ ಸ್ಥಿತಿ ಇದೆ. ನೀರು ಒಯ್ದರೆ, ಇಲ್ಲಿನವರ ಗತಿ ಏನು?’ ಎಂದು ಪ್ರಶ್ನಿಸಿದರು.

ADVERTISEMENT

‘ಯುಕೆಪಿ ಯೋಜನೆ ಪೂರ್ಣಗೊಳಿಸುವುದು ವಿಳಂಬ ಆದಷ್ಟು ನೀರಿನ ಮೇಲೆ ಬೇರೆಯವರ ಕಣ್ಣು ಬೀಳಲಿದೆ ಎಂದು ಹಿಂದೆಯೇ ಹೇಳಿದ್ದೆ. ಈಗ ಅದು ನಿಜವಾಗುತ್ತಿದೆ. ಕಾವೇರಿ ವ್ಯಾಜ್ಯವಿರುವಾಗಲೇ ನೋಟಿಫಿಕೇಷನ್‌ ಹೊರಡಿಸಲಾಗಿತ್ತು. ಕಾವೇರಿಯಿಂದ 2 ಟಿಎಂಸಿ ಅಡಿ ನೀರು ಹೋದರೆ ಬೆಂಗಳೂರು ಹೊತ್ತಿ ಉರಿಯುತ್ತದೆ. ಇಲ್ಲಿ ₹130 ಟಿಎಂಸಿ ಅಡಿ ನೀರು ಹೋದರೂ ಕೇಳುವವರಿಲ್ಲ. ಎಲ್ಲರೂ ಸೇರಿ ಒಗ್ಗಟ್ಟಿನ ಹೋರಾಟ ರೂಪಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.