ADVERTISEMENT

ಬಾಗಲಕೋಟೆ: ಬೀದಿನಾಯಿಗಳ ನಿಯಂತ್ರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:39 IST
Last Updated 9 ಜನವರಿ 2026, 7:39 IST
ಬೀದಿನಾಯಿ ನಿಯಂತ್ರಿಸುವಂತೆ ಆಗ್ರಹಿಸಿ ಗಿರೀಶ ಫೌಂಡೇಷನ್‌ ವತಿಯಿಂದ ನಗರಸಭೆ ಪೌರಾಯುಕ್ತ ವಾಸಣ್ಣ ಅವರಿಗ ಗುರುವಾರ ಮನವಿ ಸಲ್ಲಿಸಲಾಯಿತು
ಬೀದಿನಾಯಿ ನಿಯಂತ್ರಿಸುವಂತೆ ಆಗ್ರಹಿಸಿ ಗಿರೀಶ ಫೌಂಡೇಷನ್‌ ವತಿಯಿಂದ ನಗರಸಭೆ ಪೌರಾಯುಕ್ತ ವಾಸಣ್ಣ ಅವರಿಗ ಗುರುವಾರ ಮನವಿ ಸಲ್ಲಿಸಲಾಯಿತು   

ಬಾಗಲಕೋಟೆ: ‘ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರಿಗೆ ತೊಂದರೆಯಾಗುತ್ತಿದೆ. ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅವುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ಗಿರೀಶ ಫೌಂಡೇಷನ್‌ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

‘ನವನಗರದ ಅಂಧ ಮಕ್ಕಳ ಶಾಲೆಯ 10ಕ್ಕೂ ಹೆಚ್ಚು ಮಕ್ಕಳ ಮೇಲೆ ಈಚೆಗೆ ಬೀದಿನಾಯಿಗಳು ದಾಳಿ ಮಾಡಿದ್ದವು. ಅದಲ್ಲದೇ ಹಲವು ಕಡೆಗಳಲ್ಲಿ ಇಂತಹದೇ ಪ್ರಕರಣಗಳಾಗಿವೆ. ಇದರಿಂದ ಓಡಾಡುವುದೂ ತೊಂದರೆಯಾಗಿದೆ’ ಎಂದು ದೂರಿದರು.

‘ಪ್ರಮುಖ ರಸ್ತೆಗಳ ಬದಿಯಲ್ಲಿ ಅನಧಿಕೃತ ಚಿಕನ್ ಮತ್ತು ಮಾಂಸದ ಅಂಗಡಿಗಳು ತಲೆ ಎತ್ತಿವೆ. ಇಂತಹ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗದಿರುವುದರಿಂದ ಬೀದಿನಾಯಿಗಳಿಗೆ ಆಹಾರ ಸುಲಭವಾಗಿ ಸಿಗುತ್ತಿದೆ. ಅನಧಿಕೃತವಾಗಿ ಅಂಗಡಿಗಳನ್ನು ತೆರೆದಿದ್ದರೂ ನಗರಸಭೆ ಕ್ರಮಕೈಗೊಳ್ಳದಿರುವುದೇ ಎಲ್ಲ ಅನಾಹುತಕ್ಕೆ ಕಾರಣವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕೂಡಲೇ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಹಾಗೂ ಅವಶ್ಯಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಪ್ರಾರಂಭಿಸಬೇಕು. ಅನಧಿಕೃತ ಮಾಂಸದ ಅಂಗಡಿಗಳನ್ನು ತೆರವುಗೊಳಿಸಬೇಕು. ನಿಯಮಾನುಸಾರ ಅನುಮತಿ ನೀಡಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮಾಂಸದ ತ್ಯಾಜ್ಯ ನಿರ್ವಹಣೆ ಮೇಲೆ ಗಮನಹರಿಸಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳಿಗೆ ನಗರಸಭೆಯೇ ಹೊಣೆ ಹೊರಬೇಕಾಗುತ್ತದೆ’ ಎಂದು ತಿಳಿಸಿದರು.

ಗಿರೀಶ ಭಾಂಡಗೆ, ಮಹಾಂತೇಶ ಹಿರೇಮಠ, ಚಂದ್ರು ರಾಮೋಡಗಿ, ಮಲ್ಲಿಕಾರ್ಜುನ ಕಾಂಬಳೆ, ಶಂಕರ ಗಲಗ, ಕಿರಣ ಬಾಗೇವಾಡಿ, ರಾಜು ಶಿಂತ್ರೆ, ಶಿವು ಸುರಪುರ, ಕುಮಾರ ಚವಾಣ, ಅಶೋಕ ಕಮಲಾಪುರ, ವಿಶ್ವನಾಥ ವೈಜಾಪುರ, ಮುಪ್ಪಯ್ಯ ಹಾಲಳ್ಳಿಮಠ, ಶಂಕರ ಕದಮ, ಸುನೀಲ ಜಾಧವ, ಭರತ ಲೋಖಂಡೆ, ಆನಂದ ಚವ್ಹಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.