ADVERTISEMENT

ಗದಗ- ಇಳಕಲ್- ವಾಡಿ ರೈಲು ಮಾರ್ಗಕ್ಕಾಗಿ ಹೋರಾಟದ ಅಗತ್ಯವಿದೆ: ಸೊನ್ನದ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 3:13 IST
Last Updated 8 ಸೆಪ್ಟೆಂಬರ್ 2020, 3:13 IST
ಇಳಕಲ್‍ನ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ನಾಗರಾಜ ಹೊಂಗಲ್ ಮಾತನಾಡಿದರು.
ಇಳಕಲ್‍ನ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ನಾಗರಾಜ ಹೊಂಗಲ್ ಮಾತನಾಡಿದರು.   

ಇಳಕಲ್ : 'ಇಳಕಲ್ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಗದಗ-ನರೇಗಲ್- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗದ ಬಗ್ಗೆ ಬಲವಾಗಿ ಹಕ್ಕೊತ್ತಾಯ ಮಾಡಬೇಕಾಗಿದೆ. ಅಗತ್ಯಬಿದ್ದರೇ ಹೋರಾಟಕ್ಕೂ ಸಿದ್ಧರಾಗಬೇಕು' ಎಂದು ಉದ್ಯಮಿ ವಿರೇಶ ಸೊನ್ನದ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಭಾನುವಾರ ಇಲ್ಲಿಯ ಅನುಭವ ಮಂಟಪದಲ್ಲಿ ನಡೆದ ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇಳಕಲ್ ನಗರ ಅತಿ ಮಹತ್ವ ರೈಲ್ವೆ ಯೋಜನೆಗಳಿಂದ ವಂಚಿತವಾಗಿದೆ. ಈ ಬಗ್ಗೆ ಇಳಕಲ್ ಜನ ಎಚ್ಚೆತ್ತುಕೊಳ್ಳಬೇಕು. ನಮ್ಮ ಸಂಸದರ ನಿರ್ಲಕ್ಷ್ಯದಿಂದ ನ್ಯಾಯ ಸಮ್ಮತವಾಗಿ ಆಗಲೇಬೇಕಾಗಿದ್ದ ಮೂಲ ಯೋಜನೆಗಳಿಂದ ವಂಚಿತರಾಗಿದ್ದೇವೆ. ರಾಜಕಾರಣಿಗಳ ಬಣ್ಣದ ಮಾತಿಗೆ ಮರುಳಾಗದೇ ಕೈತಪ್ಪಿ ಹೋಗಿರುವ ಯೋಜನೆಯನ್ನು ಮರಳಿ ಪಡೆಯಲು ಹೋರಾಟದ ಅಗತ್ಯವಿದೆ' ಎಂದು ಸೊನ್ನದ ತಿಳಿಸಿದರು.

ಗದಗ- ಇಳಕಲ್ - ವಾಡಿ ಮಾತ್ರವಲ್ಲದೇ ಸೀತಿಮನಿ- ಇಳಕಲ್- ಹೊಸಪೇಟೆ- ಚಿತ್ರದುರ್ಗ ಮತ್ತು ಬೆಳಗಾವಿ- ಬಾಗಲಕೋಟೆ- ಇಳಕಲ್- ಹೈದರಾಬಾದ್ ಮಾರ್ಗದ ಯೋಜನೆಗಳು ಕಾರ್ಯಗತವಾಗಿ ಇಳಕಲ್ ನಗರ ಎಷ್ಟೋ ದಶಕಗಳ ಹಿಂದೆಯೇ ಬೃಹತ್ ರೈಲ್ವೆ ಜಾಲದ ಜಂಕ್ಷನ್ ಆಗಬೇಕಾಗಿತ್ತು. ಆದರೆ ನಮ್ಮ ಭಾಗದ ಎಲ್ಲ ಸಂಸದರ ನಿರ್ಲಕ್ಷದ ಫಲವಾಗಿ ಎಲ್ಲವೂ ಕೈತಪ್ಪಿ ಹೋಗಿವೆ. ಗದಗ- ಇಳಕಲ್ - ವಾಡಿ ರೈಲ್ವೆ ಯೋಜನೆ ಜಾರಿಗಾಗಿ ಕೊಪ್ಪಳ, ಗದಗ ಜಿಲ್ಲೆಯವರ ಹೋರಾಟಕ್ಕೆ ಇಳಕಲ್ ನಗರದಿಂದ ಸಂಪೂರ್ಣ ಬೆಂಬಲ, ಸಹಕಾರ ಸಿಗಲಿದೆ ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಭರವಸೆ ನೀಡಿದರು.
ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕಾಂತಿಲಾಲ ಜೈನ್ ಮಾತನಾಡಿ, 'ಬ್ರಿಟಿಷರು- ಹೈದರಾಬಾದ್ ನವಾಬರ ಆಡಳಿತಾವಧಿಯಲ್ಲೇ ಗದಗ- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗ ಯೋಜನೆ ಸಿದ್ಧವಾಗಿತ್ತು. ಈ ಸದರಿ ಯೋಜನೆಯನ್ನು ಪರಿವರ್ತನೆ ಮಾಡಲಾಗಿದ್ದು, ಗಜೇಂದ್ರಗಡ, ಇಳಕಲ್ ಮೂಲಕ ಹಾಯ್ದು ಹೋಗಬೇಕಿದ್ದ ಮಾರ್ಗವನ್ನು ಮಾರ್ಪಡಿಸಿ ಅನ್ಯಾಯ ಎಸಗಲಾಗಿದೆ. ನಾವೆಲ್ಲಾ ಒಗ್ಗಟ್ಟಿನಿಂದ ಫಲಿತಾಂಶ ಆಧಾರಿತ ಹೋರಾಟಕ್ಕೆ ಸಿದ್ಧರಾಗಲೇಬೇಕು ಎಂದರು.

ADVERTISEMENT

ಮನೋಜಕುಮಾರ ಬಡಿಗೇರ ರೇಲ್ವೆ ಮೂಲಕ ಯೋಜನೆಯ ವಿವರಗಳನ್ನು ತಿಳಿಸಿದರು. ಸಭೆಯಲ್ಲಿ ಹೋರಾಟ ಸಮಿತಿಯ ಗಣೇಶಸಿಂಗ್ ಬ್ಯಾಳಿ, ಅಶೋಕ ಬೇವಿನಕಟ್ಟಿ, ಬಸವರಾಜ ವಂಕಲಕುಂಟಿ, ಶಿವಾನಂದ ಬಡಿಗೇರ, ಎಂ.ಆರ್. ಪಾಟೀಲ ಮಾತನಾಡಿದರು.
ಸಿ. ಸಿ. ಚಂದ್ರಾಪಟ್ಟಣ, ಸಿರಾಜ್ ಖಾಜಿ, ಕಾಸೀಮಸಾ ಕಂದಗಲ್, ಸಂಧ್ಯಾ ಗುಂಡಿ, ವಿಲಿಯಂ ಗುಂಡೀಗೆರಿ, ದಾವಲಸಾಬ ಮೋಮಿನ ಮತ್ತಿತರರು ಸಭೆಯಲ್ಲಿದ್ದರು. ಜಗದೀಶ ಸರಾಫ ವಂದನಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.