ರಬಕವಿ ಬನಹಟ್ಟಿ: ಸಮೀಪದ ಹೊಸೂರಿನ ರೈತರಾದ ಕೃಷ್ಣಾ ನಿಂಗಸಾನಿ ಮತ್ತು ತಿಮ್ಮಣ್ಣ ನಿಂಗಸಾನಿ ತಮ್ಮ ತೋಟದ ಮೂರು ಎಕರೆ ಭೂ ಪ್ರದೇಶದಲ್ಲಿ ಸಕ್ಕರೆ ಗಡ್ಡೆಯನ್ನು ಬೆಳೆದು ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ತಾಲ್ಲೂಕಿನ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಗೋದಾವರಿ ಬಯೋರಿಫೈನರ್ ಮಾರ್ಗದರ್ಶನದಲ್ಲಿ ಸಕ್ಕರೆ ಗಡ್ಡೆಯನ್ನು ಇವರು ಬೆಳೆಯುತ್ತಿದ್ದಾರೆ.
‘ಶುಗರ್ ಬೀಟ್ ಎಂದು ಕರೆಯಲಾಗುವ ಇದನ್ನು ಸಕ್ಕರೆ ಉತ್ಪಾದನೆ ಮಾಡಲು ಬಳಸುತ್ತಾರೆ. ಈ ಭಾಗದಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಇದನ್ನು ಬೆಳೆಯುತ್ತಿದ್ದಾರೆ. ಅಂದಾಜು 120 ರಿಂದ 130 ದಿನಗಳ ಬೆಳೆಯಾಗಿದೆ. ನಂತರ ಗಡ್ಡೆಯನ್ನು ನೆಲದಿಂದ ಬೇರ್ಪಡಿಸಿ ಕಾರ್ಖಾನೆಗೆ ಕಳುಹಿಸಲಾಗುತ್ತದೆ. ಸಕ್ಕರೆ ಗಡ್ಡೆಯ ಗುಣಮಟ್ಟ ಚೆನ್ನಾಗಿ ಬಂದರೆ ಅದನ್ನು ಸಕ್ಕರೆ ಉತ್ಪಾದನೆಗೆ ಬಳಸುತ್ತಾರೆ. ಇದನ್ನು ಇಥೆನಾಲ್ ಉತ್ಪಾದನೆ ಮಾಡಲು ಕೂಡ ಬಳಸುತ್ತಾರೆ’ ಎಂದು ರೈತರಾದ ಕೃಷ್ಣಾ ನಿಂಗಸಾನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದು ಎಕರೆಗೆ ಅಂದಾಜು 1 ಕೆ.ಜಿ.ಯಷ್ಟು ಬೀಜ ಬೇಕಾಗುತ್ತದೆ. ಒಂದು ಕೆ.ಜಿ.ಗೆ ₹ 5400 ಬೆಲೆಯಿದೆ. ಆದರೆ ಕಾರ್ಖಾನೆಯವರು ರಿಯಾಯ್ತಿ ದರದಲ್ಲಿ ಅರ್ಧದಷ್ಟು ಬೆಲೆಗೆ ನೀಡುತ್ತಾರೆ. ಒಂದು ಎಕರೆಯಲ್ಲಿ ಅಂದಾಜು 30 ರಿಂದ 35 ಟನ್ಗಳಷ್ಟು ಇಳುವರಿ ಬರಬಹುದು. ಒಂದು ಟನ್ ಸಕ್ಕರೆ ಗಡ್ಡೆಗೆ ₹ 2,200 ರಿಂದ ₹ 2,500 ಬೆಲೆ ನಿರೀಕ್ಷಿಸಿದ್ದೇವೆ’ ಎಂದು ಅವರು ತಿಳಿಸಿದರು.
ಈ ಬೆಳೆಗೆ ನೀರು ಮತ್ತು ಗೊಬ್ಬರದ ಬಳಕೆ ಕಡಿಮೆ. ವಾರಕ್ಕೆ ಒಂದು ಬಾರಿ ನೀರನ್ನು ನೀಡುವುದರ ಜೊತೆ ಭೂಮಿಯಲ್ಲಿ ತೇವಾಂಶ ಕಾಯ್ದುಕೊಂಡರೆ ಸಾಕಷ್ಟು ಪ್ರಮಾಣದಲ್ಲಿ ಇಳುವರಿ ಬರಬಹುದು. ಅದೇ ರೀತಿ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಕೀಟ ಬಾಧೆ ತಡೆಯಲು ಔಷಧ ಸಿಂಪಡಣೆ ಮಾಡಲಾಗಿದೆ.
ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯ ಮಾಲೀಕರಾದ ಸಮೀರ ಸೋಮಯ್ಯ ಅವರು ನಿಂಗಸಾನಿ ಅವರ ಗದ್ದೆಗೆ ಭೇಟಿ ನೀಡಿ ಬೆಳೆಯನ್ನು ಪರಿಶೀಲಿಸಿದ್ದಾರೆ. ತೋಟಕ್ಕೆ ಅಧಿಕಾರಿಗಳೂ ಭೇಟಿ ನೀಡಿ ಬೆಳೆ ವೀಕ್ಷಿಸಿದ್ದು, ಉತ್ತಮವಾಗಿ ಬೆಳೆದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಕ್ಕರೆ ಗಡ್ಡೆ ಯಶಸ್ವಿಯಾಗಿ ಬಂದರೆ ಕಬ್ಬಿಗೆ ಪರ್ಯಾಯವಾಗಿ ಬೆಳೆಯಾಗಬಹುದು. ಕಬ್ಬು 12 ತಿಂಗಳ ಬೆಳೆಯಾದರೆ ಇದು ನಾಲ್ಕೂವರೆ ತಿಂಗಳ ಬೆಳೆಯಾಗಿದೆ
-ತಿಮ್ಮಣ್ಣ ನಿಂಗಸಾನಿ ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.