
ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆ ಕಠಿಣವಾದ ಚಿಕಿತ್ಸಾ ವಿಧಾನವಾಗಿದೆ. ಈ ಕ್ಷೇತ್ರದಲ್ಲಿ ಪರಿಣತಿ ಹೊಂದಲು ವೈದ್ಯರಿಗೆ ತರಬೇತಿ ಅವಶ್ಯಕವಾಗಿದೆ ಎಂದು ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಹೇಳಿದರು.
ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಲುಬು ಮತ್ತು ಕೀಲು ವಿಭಾಗ, ರಾಜ್ಯ, ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕ್ಯಾಡವರಿಕ್ ಕೋರ್ಸಿನಲ್ಲಿ ಕೈ ಮತ್ತು ಕಾಲು ಶಸ್ತ್ರಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿ ಮೂಲಕ ಪರಿಣತ ಮತ್ತು ಕೌಶಲಪೂರ್ಣ ಶಸ್ತ್ರಚಿಕಿತ್ಸಕರನ್ನು ರೂಪಿಸಲು ಸಾಧ್ಯ ಎಂದರು.
ಕ್ಯಾಡವರಿಕ್ ಸ್ಕಿಲ್ ಲ್ಯಾಬ್ನಲ್ಲಿ ನೀಡುತ್ತಿರುವ ಶಸ್ತ್ರಚಿಕಿತ್ಸಾ ತರಬೇತಿಯು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ವಿನೂತನ ವಿಧಾನವಾಗಿದೆ. ವಿವಿಧ ಪ್ರಕಾರದ ಶಸ್ತ್ರಚಿಕಿತ್ಸಾ ತಜ್ಞರು ವೃತ್ತಿಯಲ್ಲಿ ಪರಣತಿ ಹೊಂದಲು ಈ ವಿಧಾನ ಉಪಯುಕ್ತವಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ 39 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 20 ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸಾ ತಜ್ಞರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.
ಶಸ್ತ್ರಚಿಕಿತ್ಸಾ ತಜ್ಞ ಡಾ.ಶಿವರಾಜ ಎ.ಸಿ ಮತ್ತು ಎಸ್.ಎನ್.ಮೆಡಿಕಲ್ ಕಾಲೇಜಿನ ಎಲುಬು ಮತ್ತು ಕೀಲು ವಿಭಾಗ ಹಾಗೂ ಅಂಗರಚನಾಶಾಸ್ತ್ರ ವಿಭಾಗದ ವೈದ್ಯರು ಶಿಬಿರಾರ್ಥಿಗಳಿಗೆ ಕೈ ಮತ್ತು ಕಾಲು ಶಸ್ತ್ರಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕ ತರಬೇತಿ ನೀಡಿದರು. ಮೃತಶರೀರವನ್ನು ಉಪಯೋಗಿಸಿಕೊಂಡು ತರಬೇತಿ ನೀಡಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಅಡ್ವಾನ್ಸ್ ಕ್ಯಾಡವರಿಕ್ ಸ್ಕಿಲ್ ಲ್ಯಾಬ್ ಸಂಯೋಜಕ ಡಾ.ಸಂಜೀವ ಕೊಳಗಿ, ಬಾಗಲಕೋಟೆ ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಉದಯಕುಮಾರ ನಾಯಕ್, ಕಾರ್ಯದರ್ಶಿ ಡಾ.ಶುಶ್ರುತ ಭಾವಿ ಇದ್ದರು.
ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ. ಪಟ್ಟೇದ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಗಾರದ ಕಾರ್ಯದರ್ಶಿ ಡಾ.ಎಂ.ಬಿ.ಮೂಲಿಮನಿ ಸ್ವಾಗತಿಸಿದರು. ಡಾ.ಹರ್ಷ ಕ್ಯಾಲಕೊಂಡ ವಂದಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.