ADVERTISEMENT

ತೇರದಾಳ | ಅತಿಕ್ರಮಣ: ಪುರಸಭೆಗೆ ಮಹಿಳೆಯರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:40 IST
Last Updated 16 ಡಿಸೆಂಬರ್ 2025, 2:40 IST
ತೇರದಾಳದ ದೇವರಾಜ ನಗರದ ವಾರ್ಡ ಸಂಖ್ಯೆ 7ರಲ್ಲಿನ ಸಾರ್ವಜನಿಕ ಶೌಚಾಲಯದ ಬಳಿಯ ಪುರಸಭೆ ಜಾಗವನ್ನು ಅತೀಕ್ರಮಣಗೊಳಿಸಿದ್ದನ್ನು ತೆರವುಗೊಳಿಸಿ ಕೊಡುವಂತೆ ಆಗ್ರಹಿಸಿ ಮಹಿಳೆಯರು ಪುರಸಭೆ ಕಾಯರ್ಾಲಯಕ್ಕೆ ಮುತ್ತಿಗೆ ಹಾಕಿ, ಅಧಿಕಾರಿಗಳೊಂದಿಗೆ ಮಾತಿಗಿಳಿದರು.
ತೇರದಾಳದ ದೇವರಾಜ ನಗರದ ವಾರ್ಡ ಸಂಖ್ಯೆ 7ರಲ್ಲಿನ ಸಾರ್ವಜನಿಕ ಶೌಚಾಲಯದ ಬಳಿಯ ಪುರಸಭೆ ಜಾಗವನ್ನು ಅತೀಕ್ರಮಣಗೊಳಿಸಿದ್ದನ್ನು ತೆರವುಗೊಳಿಸಿ ಕೊಡುವಂತೆ ಆಗ್ರಹಿಸಿ ಮಹಿಳೆಯರು ಪುರಸಭೆ ಕಾಯರ್ಾಲಯಕ್ಕೆ ಮುತ್ತಿಗೆ ಹಾಕಿ, ಅಧಿಕಾರಿಗಳೊಂದಿಗೆ ಮಾತಿಗಿಳಿದರು.   

ತೇರದಾಳ: ಇಲ್ಲಿನ ದೇವರಾಜ ನಗರದ ವಾರ್ಡ್‌ ಸಂಖ್ಯೆ 7ರ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಮಹಿಳಾ ಶೌಚಾಲಯದ ಬಳಿಯ ಪುರಸಭೆ ಜಾಗವನ್ನು ಖಾಸಗಿ ವ್ಯಕ್ತಿ ಅತಿಕ್ರಮಣ ಮಾಡಿಕೊಳ್ಳುತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಪುರಸಭೆ ನಡೆಯನ್ನು ಖಂಡಿಸಿ ಅಲ್ಲಿನ ಮಹಿಳೆಯರು ಸೋಮವಾರ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಘಟನೆ ಜರುಗಿತು.

ಈ ವಾರ್ಡ್‌ನಲ್ಲಿ ಕೂಲಿಕಾರರು ಹಾಗೂ ಕಡುಬಡತನದ ಬಹಳಷ್ಟು ಕುಟುಂಬಗಳಿದ್ದು, ಸ್ವಂತ ಶೌಚಾಲಯ ನಿರ್ಮಿಸಿಕೊಳ್ಳದ ಸ್ಥಿತಿಯಲ್ಲಿದ್ದು ಇವರಿಗಾಗಿಯೇ ಪುರಸಭೆ ಹಲವು ವರ್ಷಗಳ ಹಿಂದೆ ಇಲ್ಲಿ ಶೌಚಾಲಯ ನಿರ್ಮಿಸಿದೆ. ಅದರ ಬಳಿ ಇನ್ನಷ್ಟು ಖಾಲಿ ಜಾಗವಿದೆ. ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ಇನ್ನಷ್ಟು ಶೌಚಾಲಯಗಳನ್ನು ನಿರ್ಮಿಸಬಹುದೆಂದು ಮಹಿಳೆಯರು ಕಾದಿದ್ದರು.

ಆದರೆ ಅಲ್ಲಿನ ನಿವಾಸಿಯೊಬ್ಬರು ದಿನದಿಂದ ದಿನ ಅಲ್ಲಿ ಕಟ್ಟಿಗೆ ಇಡುವ, ತಿಪ್ಪೆ ಕಸ ಹಾಕುವ ಮೂಲಕ ಅತಿಕ್ರಮಣ ಮಾಡಿಕೊಳ್ಳುತ್ತಿದ್ದು, ಹಲವು ದಿನಗಳ ಹಿಂದೆ ಶೌಚಕ್ಕೆಂದು ತೆರಳುವ ಮಹಿಳೆಯರಿಗೆ ಇಲ್ಲಿ ಅಡ್ಡಾಡಬೇಡಿ, ಇದು ನಮ್ಮ ಜಾಗ ಶೌಚಾಲಯ ಕಟ್ಟಿಸಿರುವ ಜಾಗ ಮಾತ್ರ ಬಳಸಿಕೊಳ್ಳಿ ಎನ್ನುವ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.

ADVERTISEMENT

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳೆಯರು ವಾರ್ಡ್‌ ಸದಸ್ಯರಿಗೆ, ಮುಖಂಡರಿಗೆ ತಿಳಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಆ ಜಾಗದಲ್ಲಿ ಶೆಡ್ ನಿರ್ಮಿಸಲು ಉದ್ದೇಶಿಸಿದ್ದನ್ನು ಗಮನಿಸಿದ ಮಹಿಳೆಯರು ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಆದ್ದರಿಂದ ಈ ಜಾಗವನ್ನು ಅತಿಕ್ರಮಣ ಮಾಡುವವರ ಮೇಲೆ ಕ್ರಮ ಕೈಗೊಂಡು ಜಾಗವನ್ನು ಶೌಚಾಲಯಕ್ಕೆ ನೀಡಬೇಕೆಂದು ಮಹಿಳೆಯರು ಆಗ್ರಹಿಸಿದರು.

ಈಗಿರುವ ಶೌಚಾಲಯಗಳಲ್ಲಿ ಮೂರು ಮಾತ್ರ ಬಳಕೆಗೆ ಯೋಗ್ಯವಾಗಿವೆ. ಉಳಿದವುಗಳನ್ನು ದುರಸ್ಥಿಗೊಳಿಸಿಕೊಡಬೇಕೆಂದು ಆಗ್ರಹಿಸಿದರು.

ಎರಡು ದಿನ ಕಾಲಾವಕಾಶ ನೀಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಎಫ್.ಬಿ. ಗಿಡ್ಡಿ ಭರವಸೆ ನೀಡಿದರು.

ರೂಪಾ ಹಾರೂಗೇರಿ, ಶಾಣವ್ವ ಸರಿಕರ, ರೂಪಾ ನಡುವಿನಕೇರಿ, ರೇಣುಕಾ ಯಾದವ, ಅಕ್ಷತಾ ಮಾಸ್ತಿ, ಸಕ್ಕುಬಾಯಿ ಕಾಗಿ, ಪದ್ಮಾ ನಡುವಿನಕೇರಿ, ಯಲ್ಲವ್ವ ಕಾಂಬಳೆ, ಸುನೀತಾ ಸುಣಗಾರ, ಸಂಗೀತಾ ಕಾಂಬಳೆ, ಯಲ್ಲವ್ವ ಗಾಣಿಗೇರ, ಮಲ್ಲವ್ವ ಸಿಂಗೆ, ಸಕ್ಕುಬಾಯಿ ದೊಡಮನಿ, ನಿರ್ಮಲಾ ಸುತಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.