ಗುಳೇದಗುಡ್ಡ: ಕೆರೆಯಲ್ಲಿ ಮುಳುಗುತ್ತಿದ್ದ ಸಹೋದರನ ರಕ್ಷಣೆಗೆ ಮುಂದಾದ ಯುವತಿ ಹಾಗೂ ಮಹಿಳೆ ಮೃತಪಟ್ಟಿರುವ ಘಟನೆ ಗುಳೇದಗುಡ್ಡ ಸಮೀಪದ ಪರ್ವತಿ ಗ್ರಾಮದ ಗಂಜಿಕೆರೆಯಲ್ಲಿ ಶನಿವಾರ ನಡೆದಿದೆ. ಗುಳೇದಗುಡ್ಡದ ನಡುವಿನ ಪೇಟೆಯ ನಿವಾಸಿಗಳಾದ ಲಲಿತಾ ಬಸವರಾಜ ಕತ್ತಿ (37), ಅನುಪಮಾ (20) ಮೃತರು. ಘಟನೆಯಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಂದೇ ಕುಟುಂಬದ (ದೊಡ್ಡಪ್ಪ– ಚಿಕ್ಕಪ್ಪನ ಮಕ್ಕಳು) 7 ಮಂದಿ ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದರು. ಬಟ್ಟೆ ತೊಳೆದ ನಂತರ ಊಟ ಮಾಡಲು ಹೋದಾಗ ನೀರಿನಲ್ಲಿ ಆಟವಾಡುತ್ತಿದ್ದ ಸಹೋದರ ಕಾಲು ಜಾರಿದ್ದನ್ನು ಗಮನಿಸಿದ ಅನುಪಮಾ ಆತನ ರಕ್ಷಣೆಗೆ ಹೋದರು. ಅವರೊಂದಿಗೆ ಉಳಿದವರೂ ಸಹಾಯಕ್ಕೆ ಹೋದರು. ಈ ವೇಳೆ ವಿನಾಯಕನನ್ನು ಕಾಪಾಡಲಾಯಿತು, ಆದರೆ ಇಬ್ಬರು ಮುಳುಗಿದರು ಎಂದು ತಿಳಿದು ಬಂದಿದೆ.
ಏಳೂ ಮಂದಿ ಅಪಾಯದಲ್ಲಿರುವುದನ್ನು ಗಮನಿಸಿದ ಯುವಕನೊಬ್ಬ ಸ್ಥಳೀಯರು ಹಾಗೂ ಮೀನುಗಾರರನ್ನು ಕರೆತಂದರು. ಕೆಲವರನನ್ನು ಬಟ್ಟೆಬಿಟ್ಟು ರಕ್ಷಿಸಲಾಯಿತು ಎನ್ನಲಾಗಿದೆ. ಸುಲೋಚನಾ, ಕೀರ್ತಿ, ಪ್ರಾಣೇಶ, ಕವಿತಾ, ವಿನಾಯಕ ಅಪಾಯದಿಂದ ಪಾರಾಗಿದ್ದಾರೆ. ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.