ಬಾಗಲಕೋಟೆ: ಎಸ್.ಆರ್. ಪಾಟೀಲ ಸಮೂಹ ಸಂಸ್ಥೆ, ಸಪ್ನ ಬುಕ್ ಹೌಸ್ ಸಹಯೋಗದಲ್ಲಿ ಆ.3 ರಂದು ಬೆಳಿಗ್ಗೆ 10ಕ್ಕೆ ಕಲಾ ಭವನದಲ್ಲಿ ಸಾಹಿತಿ ಎಂ. ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿಯ ಮಹಾಯಾನ ಸಂಪುಟ–3’ ಗದ್ಯ ಮಹಾಕಾವ್ಯ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲೇಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಗ್ರಂಥ ಕುರಿತು ಎಂ.ಎಂ. ಕಲಬುರಗಿ ರಾಷ್ಟ್ರೀಯ ಪುರಸ್ಕಾರ ಅಧ್ಯಕ್ಷ ಪ್ರೊ.ವೀರಣ್ಣ ರಾಜೂರ ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಸರಜೂ ಕಾಟ್ಕರ್ ಆಶಯ ನುಡಿಯಾಡಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಭಾಗವಹಿಸಲಿದ್ದಾರೆ. ಲೇಖಕ ಎಂ. ವೀರಪ್ಪ ಮೊಯಿಲಿ ಅವರೂ ಭಾಗಿಯಾಗಲಿದ್ದು, ಅದಕ್ಕೂ ಮುನ್ನ ಸಂಗೀತ ಕಟ್ಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
ಮಹಾಯಾನದ ಎರಡು ಸಂಪುಟಗಳು ಈಗಾಗಲೇ ಬಿಡುಗಡೆಯಾಗಿದ್ದು, ಮೂರನೇ ಸಂಪುಟ ಬಿಡುಗಡೆಯಾಗಲಿದೆ. ಐದು ಸಂಪುಟಗಳ ರಚನೆಯಾಗಲಿದೆ. ಈ ಸಂಪುಟದಲ್ಲಿ ಬಸವ ವಿಶ್ವರೂಪದರ್ಶನವಿದೆ. ದಾರ್ಶನಿಕ ಬಸವಣ್ಣವರ ಜೀವನಯಾನ, ಅವರು ರೂಪಿಸಿದ ಲಿಂಗವಂತ ಧರ್ಮ, ವಚನಗಳು, ಕಾಯಕ, ದಾಸೋಹ ಮುಂತಾದ ಕೊಡುಗೆಗಳ ಕುರಿತು ವಿವರಿಸಲಾಗಿದೆ ಎಂದರು.
ಮುಖ್ಯಮಂತ್ರಿಯಾಗಿ ಮೊಯಿಲಿ ಅವರು ಕೆಂಪೇಗೌಡ ನಿಮಾನ ನಿಲ್ದಾಣ ನಿರ್ಮಾಣಕ್ಕೆ ಮಂಜೂರು, ಶಿಕ್ಷಕರ ನೇಮಕಾತಿ, ಕೆಬಿಜೆಎನ್ಎಲ್ ಸ್ಥಾಪನೆ, ಕೂಡಲಸಂಗಮ ಪ್ರಾಧಿಕಾರ ರಚನೆ, ವಿಟಿಯು ಸೇರಿದಂತೆ ಹಲವು ವಿವಿ ಗಳ ಆರಂಭ ಮಾಡಿದ್ದ ಅವರು, ಈಗ ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಸಾಹಿತಿ ಸತ್ಯಾನಂದ ಪಾತ್ರೋಟ, ಬಾಪೂಜಿ ಸಹಕಾರಿ ಬ್ಯಾಂಕ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಮೋಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.