ADVERTISEMENT

‘ಐಬಿ‘ ಯಲ್ಲಿ ಮದ್ಯ ಸೇವಿಸಿದ ವಿಡಿಯೊ ಪ್ರಕರಣ |ಐವರು ಎಂಜಿನಿಯರ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಮೇ 2024, 23:30 IST
Last Updated 25 ಮೇ 2024, 23:30 IST
   

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಲೋಕೋಪಯೋಗಿ ಇಲಾಖೆಯ ‘ರಮಾ ನಿವಾಸ’ ನಿರೀಕ್ಷಣಾ ಮಂದಿರ (ಐಬಿ) ಕಚೇರಿ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಮದ್ಯ ಸೇವಿಸುತ್ತ ಮೋಜು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಕೆ.ಎಂ. ಜಾನಕಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮೋಜು ಮಾಡಿದ ವಿಡಿಯೊದಲ್ಲಿ ಇದ್ದ ಪಂಚಾಯತ್ ರಾಜ್‌ ಜಮಖಂಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್‌.ಎಂ. ನಾಯಕ,  ಸಹಾಯಕ ಎಂಜಿನಿಯರ್‌ಗಳಾದ ಜಗದೀಶ ನಾಡಗೌಡ, ರಾಮಪ್ಪ ರಾಠೋಡ, ಕಿರಿಯ ಎಂಜಿನಿಯರ್ ಗಜಾನನ ಪಾಟೀಲ ಅವರನ್ನು ಅಮಾನತು ಮಾಡಲಾಗಿದೆ.

ನಿರೀಕ್ಷಣಾ ಮಂದಿರದ ಸಿಬ್ಬಂದಿ ವಿಚಾರಿಸಿದಾಗ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಎಸ್‌.ಆರ್‌. ಜಂಬಗಿ ಅವರ ನಿರ್ದೇಶನದ ಮೇರೆಗೆ ‘ಐಬಿ’ ಬೀಗಗಳನ್ನು ಪಂಚಾಯತ್ ರಾಜ್‌ ಎಂಜಿನಿಯರ್‌ಗಳಿಗೆ ನೀಡಲಾಗಿತ್ತು. ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆಯದ ಜಂಬಗಿ ಅವರನ್ನೂ ಅಮಾನತುಗೊಳಿಸಲಾಗಿದೆ.

ADVERTISEMENT

ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಗುತ್ತಿಗೆದಾರರೊಂದಿಗೆ ಸೇರಿ ನಿರೀಕ್ಷಣಾ ಮಂದಿರವನ್ನು ಅನಧಿಕೃತವಾಗಿ ಪ್ರವೇಶಿಸಿ, ಊಟ ಮತ್ತು ಮದ್ಯ ಸೇವನೆ ಮಾಡಿ ಗಂಭೀರ ಅಶಿಸ್ತಿನ ನಡವಳಿಕೆ ತೋರಿರುವುದು. ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜಮಖಂಡಿ ಉಪವಿಭಾಗಾಧಿಕಾರಿ ವರದಿ ಹಾಗೂ ಅಧಿಕಾರಿಗಳು ನೋಟಿಸ್‌ಗೆ ನೀಡಿರುವ ಲಿಖಿತ ಉತ್ತರ ಆಧರಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.