ಗುಳೇದಗುಡ್ಡ: ‘ಗ್ರಾಮದ ಜನರು ಒಟ್ಟಾಗಿ ಗ್ರಾಮದಲ್ಲಿ ಯಾವ ಕಾಮಗಾರಿಗಳು ತೀರಾ ಅಗತ್ಯವಾಗಿದೆ ಎಂಬುದನ್ನು ಚರ್ಚಿಸಿ ತಿಳಿಸಿದರೆ ಅದಕ್ಕೆ ಮೊದಲು ಆದ್ಯತೆ ನೀಡಲಾಗುವುದು. ಗ್ರಾಮಗಳ ಅಭಿವೃದ್ಧಿಯಲ್ಲಿ ನಾನು ಯಾವುದೇ ಜಾತಿ, ಧರ್ಮ, ರಾಜಕಾರಣ ಮಾಡುವುದಿಲ್ಲ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿಯಾಗಿದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಕಟಗೇರಿ ಗ್ರಾಮದಲ್ಲಿ ಶನಿವಾರ ₹11 ಲಕ್ಷ ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ದುರಸ್ತಿ, 15 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ, 12 ಲಕ್ಷ ವಚ್ಚದಲ್ಲಿ ಅಲ್ಪಸಂಖ್ಯಾತ ಕಾಲೊನಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ₹10 ಲಕ್ಷ ವೆಚ್ಚದಲ್ಲಿ ಎಸ್.ಸಿ.ಕಾಲೊನಿಯಲ್ಲಿ ಸಿಸಿ ರಸ್ತೆ ಕಾಮಗಾರಿ, ₹10 ಲಕ್ಷ ವೆಚ್ಚದಲ್ಲಿ ಕಾಂಚನೇಶ್ವರಿ ದೇವಸ್ಥಾನ ಕಾಮಗಾರಿ, ₹5 ಲಕ್ಷ ವೆಚ್ಚದಲ್ಲಿ ಈಶ್ವರಲಿಂಗೇಶ್ವರ ದೇವಸ್ಥಾನ ಕಾಮಗಾರಿ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬರೋಟರಿ ಕಟ್ಟಡ ಉದ್ಘಾಟನೆ, 5 ಲಕ್ಷ ವೆಚ್ಚದಲ್ಲಿ ಗ್ರಾಮದ ಯಮನೂಪ್ಪ ದೇವಸ್ಥಾನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ. ಕಾಮಗಾರಿಗೆ ಗ್ರಾಮಸ್ಥರು ಸಹಕಾರ ನೀಡಬೇಕು. ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಅಲ್ಲದೇ ಗ್ರಾಮದಲ್ಲಿನ ಮೂಲ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡುತ್ತೇನೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ದ್ಯಾಮಣ್ಣವರ, ಉಪಾಧ್ಯಕ್ಷ ಕೈಲಾಸ ಕುಂಬಾರ, ಸದಸ್ಯರಾದ ಭೀಮಪ್ಪ ಡಬಗಲ್ಲ, ಸಿದ್ದು ಕೋಲ್ಹಾರ, ಸಂಗಣ್ಣ ಹಂಡಿ, ಬಿ.ಎಸ್.ಹದ್ಲಿ, ಪಿ.ಎಸ್.ಮೊಕಾಶಿ, ಯು.ಬಿ.ಮೊಕಾಶಿ, ಯಮನೂರ ಗುಡ್ಡದ, ಗಂಗಯ್ಯ ಶಿವಪ್ಪಯ್ಯನಮಠ, ಬಸು ಹೂಗಾರ, ಕೃಷಿಕ ಸಮಾಜ ಅಧ್ಯಕ್ಷ ಬಿ.ಎಸ್.ಮೊಕಾಶಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ಪಿಡಿಒ ರಾಮಚಂದ್ರ ಮೇತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.