ADVERTISEMENT

ಶಿರೂರ ಪ.ಪಂಗೆ ನೀಲಾನಗರ ಸೇರಿಸದಿರಲು ಮನವಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 16:25 IST
Last Updated 19 ನವೆಂಬರ್ 2020, 16:25 IST
ಶಿರೂರ ಪಟ್ಟಣ ಪಂಚಾಯಿತಿಗೆ ತಮ್ಮ ಗ್ರಾಮವನ್ನು ಸೇರಿಸಬಾರದೆಂದು ಆಗ್ರಹಿಸಿ ನೀಲಾನಗರ ಗ್ರಾಮಸ್ಥರು ಸಚಿವರು, ಶಾಸಕರಿಗೆ ಬರೆದಿರುವ ಪತ್ರಗಳನ್ನು ಪ್ರದರ್ಶಿಸಿದರು
ಶಿರೂರ ಪಟ್ಟಣ ಪಂಚಾಯಿತಿಗೆ ತಮ್ಮ ಗ್ರಾಮವನ್ನು ಸೇರಿಸಬಾರದೆಂದು ಆಗ್ರಹಿಸಿ ನೀಲಾನಗರ ಗ್ರಾಮಸ್ಥರು ಸಚಿವರು, ಶಾಸಕರಿಗೆ ಬರೆದಿರುವ ಪತ್ರಗಳನ್ನು ಪ್ರದರ್ಶಿಸಿದರು   

ರಾಂಪುರ: ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿರುವ ಶಿರೂರ ಪಟ್ಟಣ ಪಂಚಾಯಿತಿಗೆ ತಮ್ಮ ಗ್ರಾಮವನ್ನು ಸೇರ್ಪಡೆ ಮಾಡದಿರುವಂತೆ ನೀಲಾನಗರ ಗ್ರಾಮಸ್ಥರು ಪೌರಾಡಳಿತ ಸಚಿವರಿಗೆ ಮನವಿ ಮಾಡಿದ್ದಾರೆ.

ಸರ್ಕಾರ ಶಿರೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದ್ದು, ಪಕ್ಕದ ನೀಲಾನಗರ ಗ್ರಾ.ಪಂ ವ್ಯಾಪ್ತಿಯ ನೀಲಾನಗರ ಹಾಗೂ ಗುಂಡನಪಲ್ಲೆ ಪ್ರದೇಶಗಳನ್ನು ಶಿರೂರ ಪರಿವರ್ತನಾ ಪ್ರದೇಶವೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಗ್ರಾಮವನ್ನುಯಾವುದೇ ಕಾರಣಕ್ಕೂ ಶಿರೂರ ಪ.ಪಂಗೆ ಸೇರಿಸಕೂಡದೆಂದು ಗ್ರಾಮಸ್ಥರು (ಬಂಜಾರ ಸಮಾಜದವರು) ಒತ್ತಾಯಿಸಿದ್ದಾರೆ.

ಗ್ರಾಮದ ದುರ್ಗಾದೇವಿ ಮಂದಿರದ ಕುಮಾರ ಮಹಾರಾಜರ ಸಮ್ಮುಖದಲ್ಲಿ ಸಭೆ ಸೇರಿದ್ದ ಗ್ರಾಮಸ್ಥರು, ಕೆಲವು ವರ್ವಗಳ ಹಿಂದಷ್ಟೇ ನಮ್ಮದು ಪ್ರತ್ಯೇಕ ಗ್ರಾ.ಪಂ ಆಗಿದ್ದು, ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ಜೊತೆಗೆ ಪ.ಪಂಗೆ ನಮ್ಮ ಗ್ರಾಮವನ್ನು ಸೇರಿಸುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾದ ಅವಕಾಶ ತಪ್ಪಿ ಭವಿಷ್ಯ ಹಾಳಾಗುತ್ತದೆ ಎಂದು ಪೌರಾಡಳಿತ ಸಚಿವರು, ಪಂಚಾಯತ್ ರಾಜ್ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿ, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು, ಬೆಳಗಾವಿ ವಿಭಾಗೀಯ ಆಯುಕ್ತರಿಗೆ ಪತ್ರದ ಮುಖೇನ ತಿಳಿಸಿದ್ದಾರೆ.

ADVERTISEMENT

ಕುಮಾರ ಮಹಾರಾಜರು, ಜಿ.ಪಂ ಸದಸ್ಯ ರಂಗನಗೌಡ ಗೌಡರ, ನಾಗೇಶ ಪೂಜಾರಿ, ಹನಮಂತ ಪೂಜಾರಿ, ಗೋಕುಲ ದೊಡಮನಿ, ಈರಪ್ಪ ಪೂಜಾರಿ, ರಮೇಶ ಕಟ್ಟಿಮನಿ, ರಮೇಶ ಗುರಿಕಾರ ಸೇರಿದಂತೆ ಗ್ರಾಮದ ನೂರಾರು ಜನ ಪ್ರಮುಖರ ಸಹಿಯುಳ್ಳ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.