ಮಹಾಲಿಂಗಪುರ: ವೃತ್ತಿಪರ ನೇಕಾರರಿಗೆ ವಿಶೇಷ ಪರಿಹಾರ ಹಾಗೂ ಲಕ್ಷಾಂತರ ಕೂಲಿಕಾರ ನೇಕಾರರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಶಿವಾನಂದ ಟಿರಕಿ ಮಾತನಾಡಿ, ಎಲ್ಲ ವೃತ್ತಿಪರ ನೇಕಾರರ ಸಮೀಕ್ಷೆ ಮಾಡುವುದರ ಮೂಲಕ ಕಾರ್ಮಿಕ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಬೇಕು. ನೇಕಾರರಿಗೆ ಮತ್ತು ನೇಕಾರರನ್ನು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಸಬಲಗೊಳಿಸಬೇಕು. ಪ್ರತಿಬಾರಿ ಬಜೆಟ್ನಲ್ಲಿ, ಸಹಾಯಧನದ ಶ್ರಮಿಕರ ಪ್ಯಾಕೇಜ್ ಘೋಷಣೆಯಲ್ಲಿ ನೇಕಾರರನ್ನು ನಿರ್ಲಕ್ಷಿಸುವುದರ ಮೂಲಕ ಅನ್ಯಾಯವೆಸಗುತ್ತಿದ್ದು, ಕೈಮಗ್ಗ, ವಿದ್ಯುತ್ಚಾಲಿತ ಮತ್ತು ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲ ನೇಕಾರರಿಗೂ ಕನಿಷ್ಠ ₹10 ಸಾವಿರ ಪ್ರತಿ ಕುಟುಂಬಕ್ಕೆ ಘೋಷಣೆ ಮಾಡಬೇಕು. ವೃತ್ತಿಪರ ನೇಕಾರರಿಗೂ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ರಾಜೇಂದ್ರ ಮಿರ್ಜಿ, ಮಹೇಶ ಚಂಡೋಲ, ರಾಜು ಹನಗಂಡಿ, ಆನಂದ ಪಂಕಿ, ಬಸವರಾಜ ಮುಗಳಖೋಡ, ಮುತ್ತಪ್ಪ ಕುಂದ್ರಾಳ, ಶ್ರೀಶೈಲ ಬೀಸನಕೊಪ್ಪ, ಸದಾಶಿವ ಬರಗಿ, ಮಹಾಲಿಂಗಪ್ಪ ಮುಂಡಗನೂರ, ಅಶೋಕ ಢವಳೇಶ್ವರ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.