ಚಿತ್ರದುರ್ಗ: ಇಲ್ಲಿನ ರಾಕ್ಫೋರ್ಟ್ ಶಾಲಾ ಆವರಣದಲ್ಲಿ ನಡೆದ ಬಜರಂಗದಳದ ದಕ್ಷಿಣ ಪ್ರಾಂತ್ಯ ಶಿಬಿರದಲ್ಲಿ ಕಾರ್ಯಕರ್ತರಿಗೆ ಶುಕ್ರವಾರ ತ್ರಿಶೂಲ ದೀಕ್ಷೆ ನೀಡಲಾಯಿತು.
ರಾಜ್ಯದ 18 ಜಿಲ್ಲೆಗಳ ಸುಮಾರು 500 ಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಆತ್ಮರಕ್ಷಣೆಗೆ ಪೂಕರವಾಗಿರುವ ಕಲೆಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗಿದೆ. ಹಿಂದೂ ಧರ್ಮ, ಸಂಘಟನೆ, ರಾಷ್ಟ್ರಭಕ್ತಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ.
ಲಾಠಿ ತಿರುಗಿಸುವ ಬಗೆ, ಆತ್ಮರಕ್ಷಣೆಗೆ ತ್ರಿಶೂಲ ಬಳಸುವ ರೀತಿಯನ್ನು ಶಿಬಿರದಲ್ಲಿ ಕಲಿಸಲಾಗಿದೆ. ಶಿಬಿರದ ಕೊನೆಯ ದಿನ ಗಣಹೋಮ ನಡೆಸಿ ತ್ರಿಶೂಲಗಳಿಗೆ ಪೂಜೆ ಸಲ್ಲಿಸಲಾಯಿತು. ಕೇಸರಿ ಪಂಚೆ, ಶಾಲು ಧರಿಸಿದ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪೂಜೆಯ ಬಳಿಕ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿದರು. ತ್ರಿಶೂಲ ಹಿಡಿದವರು ‘ಭಾರತ್ ಮಾತಾಕಿ ಜೈ’, ‘ಸನಾತನ ಧರ್ಮಕಿ ಜೈ’ ಎಂದು ಘೋಷಣೆ ಕೂಗಿದರು.
‘ದೇಶ ಭಕ್ತಿ, ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಬಜರಂಗದಳ ಇಂತಹ ಶಿಬಿರ ಆಯೋಜಿಸುತ್ತದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಡೆಸುವ ಕಾರ್ಯಾಚರಣೆಯಲ್ಲಿ ಸ್ವಯಂ ಸೇವಕರು ಸ್ಪಂದಿಸುವ ಬಗೆಯನ್ನು ಹೇಳಿಕೊಡಲಾಗಿದೆ. ಇದು ಯಾರ ವಿರುದ್ಧವೂ ನಡೆದ ಶಿಬಿರವಲ್ಲ’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.